ಕೆಂಗ್ರೆ ಹೊಳೆಯಿಂದ ಶಿರಸಿಗೆ ನೀರು ಸರಬರಾಜು ಮಾಡುತ್ತಿದ್ದ ಕಬ್ಬಿಣದ ಪೈಪ್ ಕಳ್ಳತನವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಶಿರಸಿ ನಗರಸಭೆ ಅಧಿಕಾರಿ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ತನಿಖೆಯ ಭಾಗವಾಗಿ ಪೊಲೀಸರು ಕಬ್ಬಿಣ ಕಳ್ಳತನಕ್ಕೆ ಬಳಕೆಯಾದ ಜೆಸಿಬಿ ಯಂತ್ರ ಹಾಗೂ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಕಳ್ಳತನ ಪ್ರಕರಣದಲ್ಲಿ ನಗರಸಭೆಯ ಪ್ರಭಾವಿ ಸದಸ್ಯರು ಭಾಗಿಯಾಗಿರುವ ಬಗ್ಗೆ ದಟ್ಟವಾದ ವದಂತಿ ಹಬ್ಬಿದೆ. ಈ ಹಿನ್ನಲೆ ಅವರ ಹೆಸರು ಬಹಿರಂಗವಾಗಬೇಕು ಎಂದು ಅನೇಕರು ಒತ್ತಾಯಿಸುತ್ತಿದ್ದಾರೆ. ನಗರಸಭೆ ಸದಸ್ಯರನ್ನು ಒಳಗೊಂಡು ವಿವಿಧ ರಾಜಕೀಯ ಪಕ್ಷಗಳ ಜೊತೆ ಸಂಘಟನೆಯವರು ಸಹ ಕಠಿಣ ಕ್ರಮ ಹಾಗೂ ಸಮಗ್ರ ತನಿಖೆಗಾಗಿ ಒತ್ತಾಯಿಸುತ್ತಿದ್ದಾರೆ.
ಶಿರಸಿಗೆ ಸರಬರಾಜಾಗುತ್ತಿದ್ದ ಕುಡಿಯುವ ನೀರಿನ ಪೈಪ್ ಕಳ್ಳತನ ನಡೆದ ವಿಷಯವೇ ಮೊದಲು ಬೆಳಕಿಗೆ ಬಂದಿರಲಿಲ್ಲ. ಮಾಧ್ಯಮವೊಂದು ಈ ಬಗ್ಗೆ ವರದಿ ಪ್ರಕಟಿಸಿದ ನಂತರ ನಗರಸಭೆಯಲ್ಲಿ ಕಳ್ಳತನ ವಿಷಯ ಚರ್ಚೆಯಾಯಿತು. ಆದರೆ, ಕಬ್ಬಿಣ ಕದ್ದವರು ಯಾರು? ಎಂಬ ವಿಷಯವನ್ನು ಯಾರು ಬಾಯ್ಬಿಟ್ಟಿರಲಿಲ್ಲ. ಅದಾದ ನಂತರ ಶಿರಸಿ ನಗರಸಭೆಯಲ್ಲಿ ಕಿರಿಯ ಅಭಿಯಂತರಾಗಿರುವ ಸುಫಿಯಾನ್ ಅಹಮದ್ ಬ್ಯಾರಿ ಗುಜುರಿ ವ್ಯಾಪಾರಿ ಜಿಕ್ರಿಯಾ ಸಯ್ಯದ್ ಮೇಲೆ ಅನುಮಾನವ್ಯಕ್ತಪಡಿಸಿ ದೂರು ದಾಖಲಿಸಿದ್ದರು.
700 ಮೀಟರ್ ಉದ್ದದ ಪೈಪು ಕಳ್ಳತನ ನಡೆದಿರುವುದನ್ನು ಅವರು ದೃಢಪಡಿಸಿದ್ದರು. ಒಟ್ಟು 116 ಪೈಪು ಕಳ್ಳತನವಾಗಿರುವ ಬಗ್ಗೆ ವರದಿ ಒಪ್ಪಿಸಿದ್ದರು. ನೆಲದ ಒಳಗಿದ್ದ ಪೈಪನ್ನು ಮಣ್ಣು ಅಗೆದು ಕದ್ದಿರುವ ವಿಷಯವನ್ನು ಪ್ರಸ್ತಾಪಿಸಿದ್ದರು. ಈ ಹಿನ್ನಲೆ ಪೊಲೀಸರು ನೆಲ ಅಗೆದ ಜೆಸಿಬಿಯನ್ನು ಮೊದಲು ವಶಕ್ಕೆ ಪಡೆದರು. ನಂತರ ಪೈಪನ್ನು ಸಾಗಿಸಿದ ಟಿಪ್ಪರನ್ನು ಜಪ್ತು ಮಾಡಿದರು. ಆದರೆ, ಅನುಮಾನಾಸ್ಪದ ವ್ಯಕ್ತಿಯಾದ ಜಿಕ್ರಿಯಾ ಸಯ್ಯದ್ ಮಾತ್ರ ಈವರೆಗೂ ಸಿಕ್ಕಿಲ್ಲ. ಆತನ ಪತ್ತೆಗಾಗಿ ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ.







