ಅಂಕೋಲಾ ಜಿಸಿ ಕಾಲೇಜಿನಲ್ಲಿ ಪ್ರಾಚಾರ್ಯ ಹುದ್ದೆಗಾಗಿ ನಡೆದ ಕಾದಾಟ ವೈಯಕ್ತಿಕ ತೇಜೋವಧೆಯ ಸ್ವರೂಪ ಪಡೆದಿದೆ. ಪ್ರಾಚಾರ್ಯ ಹುದ್ದೆ ಆಕಾಂಕ್ಷಿ ಎಸ್ ಆರ್ ಶಿರೂಡ್ಕರ್ ಹಾಗೂ ಸದ್ಯದ ಪ್ರಾಚಾರ್ಯ ಸಿದ್ದಲಿಂಗೇಶ್ವರ ವಸ್ತ್ರದ ನಡುವೆ ನಿತ್ಯವೂ `ದೃಷ್ಠಿ ಯುದ್ಧ’ ನಡೆಯುತ್ತಿದೆ!
ಕಳೆದ 31 ವರ್ಷಗಳಿಂದ ಸಿದ್ದಲಿಂಗೇಶ್ವರ ವಸ್ತ್ರದ ಅವರು ಜೆಸಿ ಕಾಲೇಜಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಾಚಾರ್ಯರಾದ ನಂತರ ಅವರ ಸೇವೆ ಇನ್ನಷ್ಟು ವಿಸ್ತಾರವಾಗಿದೆ. ಈವರೆಗೆ ಅವರು ಎಲ್ಲಿಯೂ ಹೆಸರು ಕೆಡಿಸಿಕೊಂಡಿಲ್ಲ. ಆದರೆ, ಪ್ರಾಚಾರ್ಯ ಹುದ್ದೆಗಾಗಿ ನಕಲಿ ದಾಖಲೆ ಸೃಷ್ಠಿಸಿ ಸಿಕ್ಕಿಬಿದ್ದಿರುವ ಅಂಕೋಲಾ ಅಜ್ಜಿಕಟ್ಟಾದ ಎಸ್ ಆರ್ ಶಿರೂಡ್ಕರ್ ಅವರು ಸಿದ್ದಲಿಂಗೇಶ್ವರ ವಸ್ತ್ರದ ಅವರ ವಿರುದ್ಧ ಪದೇ ಪದೇ ಬೇನಾಮಿ ಅರ್ಜಿ ಬರೆಯುತ್ತಿದ್ದಾರೆ. ಈ ಅರ್ಜಿಯನ್ನು ವಾಟ್ಸಪ್ ಮೂಲಕವೂ ರವಾನಿಸಿ ಅವರು ಸಿಕ್ಕಿ ಬಿದ್ದಿದ್ದಾರೆ!
59 ವರ್ಷದ ಎಸ್ ಆರ್ ಶಿರೂಡ್ಕರ್ ಅವರು 55 ವರ್ಷದ ಸಿದ್ದಲಿಂಗೇಶ್ವರ ವಸ್ತ್ರದ ಅವರಿಗಿಂತ ಹಿರಿಯರು. ಸಿದ್ದಲಿಂಗೇಶ್ವರ ವಸ್ತ್ರದ ಅವರಿಗಿಂತಲೂ ಎಸ್ ಆರ್ ಶಿರೂಡ್ಕರ್ ಅವರಿಗೆ ಸೇವಾ ಅನುಭವ ಸಹ ಹೆಚ್ಚಿದೆ. ಪ್ರಾಣಿಶಾಸ್ತ್ರ ಉಪನ್ಯಾಸಕರಾಗಿ ಎಸ್ ಆರ್ ಶಿರೂಡ್ಕರ್ ಅವರು 39 ವರ್ಷ ಸೇವೆ ಸಲ್ಲಿಸಿದ್ದಾರೆ. ಆದರೆ, ಪ್ರಾಚಾರ್ಯರಾಗಲು ಅಗತ್ಯವಿರುವ ಅರ್ಹತೆ ಇಲ್ಲದ ಕಾರಣ ಅವರಿನ್ನು ಆ ಕಾಲೇಜಿನ ಪ್ರಾಚಾರ್ಯ ಹುದ್ದೆ ಅಲಂಕರಿಸಲಿಲ್ಲ. ಹೀಗಾಗಿ ತಮಗಿಂತ ಕಿರಿಯರು ಪ್ರಾಚಾರ್ಯರಾಗಿರುವುದನ್ನು ಸಹಿಸಿಕೊಳ್ಳಲು ಅವರಿಂದ ಸಾಧ್ಯವಾಗುತ್ತಿಲ್ಲ.
ಎಸ್ ಆರ್ ಶಿರೂಡ್ಕರ್ ಅವರಿಗೆ ಜೆಸಿ ಕಾಲೇಜಿನ ಪ್ರಾಚಾರ್ಯರಾಗಬೇಕು ಎಂಬುದು ದೊಡ್ಡ ಕನಸು. ಹೀಗಾಗಿ ಆಡಳಿತ ಮಂಡಳಿ ಶಿಫಾರಸ್ಸಿನ ಮೇರೆಗೆ ಪ್ರಾಚಾರ್ಯ ಹುದ್ದೆಗಾಗಿ ಅವರ ಹೆಸರು ಅನುಮೋದನೆಗೆ ಸಹ ಹೋಗಿತ್ತು. ಆದರೆ, ಸ್ನಾತಕೋತರ ಪದವಿಯಲ್ಲಿ ಶೇ 55ರ ಅಂಕ ಇರದಿದ್ದರೂ ಎಸ್ ಆರ್ ಶಿರೂಡ್ಕರ್ ತಮ್ಮ ಅರ್ಜಿಯಲ್ಲಿ ಉನ್ನತ ದರ್ಜೆಯಲ್ಲಿ ಪಾಸಾಗಿರುವ ಬಗ್ಗೆ ತಪ್ಪು ಮಾಹಿತಿ ನೀಡಿದ್ದರು. ನಕಲಿ ದಾಖಲೆ ಸಲ್ಲಿಸಿದ ಕಾರಣ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ಅವರ ಅರ್ಜಿಯನ್ನು ತಿರಸ್ಕರಿಸಿದ್ದರು.
ಪರಿಣಾಮ ಸಿದ್ದಲಿಂಗೇಶ್ವರ ವಸ್ತ್ರದ ಅವರು ಜೆಸಿ ಕಾಲೇಜಿನ ಪ್ರಾಚಾರ್ಯರಾದರು. ಅವರು ಪ್ರಾಚಾರ್ಯರಾಗಿ ಮೂರು ವರ್ಷ ಕಳೆದಿದ್ದು, ನೂರಾರು ಬೇನಾಮಿ ಅರ್ಜಿಗಳು ಕಾಲೇಜು ಆಡಳಿತ ಮಂಡಳಿಗೆ ಸಲ್ಲಿಕೆಯಾದವು. ಆದರೆ, ಈ ಮೂಕ ಅರ್ಜಿ ಕಳುಹಿಸುವವರಾರು? ಎಂದು ಮಾತ್ರ ಅಧಿಕೃತವಾಗಿ ಗೊತ್ತಾಗಿರಲಿಲ್ಲ. ಇದೀಗ ವಾಟ್ಸಪ್ ಮೂಲಕವೂ ಅಂಥ ಅರ್ಜಿ ಹರಿದಾಡಿದ್ದರಿಂದ ಆ ಮೂಕ ಅರ್ಜಿಯ ರುವಾರಿ ಎಸ್ ಆರ್ ಶಿರೂಡ್ಕರ್ ಎಂದು ಬಹಿರಂಗವಾಗಿದೆ.
2024ರ ಅಗಷ್ಟ್ 28ರಂದು ಹೊನ್ನಾವರ ಎಸ್ಡಿಎಂ ಕಾಲೇಜಿನ ಗಣಿತ ಉಪನ್ಯಾಸಕ ಮಹೇಶ ಭಟ್ಟ ಅವರಿಗೆ ವಾಟ್ಸಪ್ ಮೂಲಕ ಈ ಮೂಕ ಅರ್ಜಿ ಸಿಕ್ಕಿತು. ಸಿದ್ದಲಿಂಗೇಶ್ವರ ವಸ್ತ್ರದ ಅವರನ್ನು ಗುರಿಯಾಗಿರಿಸಿಕೊಂಡು `ಪ್ರೀ ಅಡ್ಮಿಶನ್ ಎಂದು ಮಂಚಕ್ಕೆ ಕರೆದ ದುಷ್ಟ ಪ್ರಾಚಾರ್ಯ. ಕಾಮ ಪಿಶಾಚಿ ಪ್ರಾಚಾರ್ಯ’ ಎಂಬ ಬರಹಗಳು ಆ ಪತ್ರದಲ್ಲಿ ಬರೆದಿದ್ದವು. ಅರ್ಜಿಯ ಮೂಲ ಹುಡುಕಿದಾಗ ಧಾರವಾಡದ ಜೆಎಸ್ಎಸ್ ಕಾಲೇಜಿನ ಶ್ರೀ ಪತ್ತಾರ್ ಅವರಿಗೂ ಆ ಪತ್ರ ರವಾನೆಯಾಗಿರುವುದು ಗೊತ್ತಾಯಿತು. ಅಲ್ಲಿ ವಿಚಾರಿಸಿದಾಗ ಪತ್ತಾರ್ ಅವರು ಆ ಪತ್ರವನ್ನು ಕುಮಟಾದ ಪ್ರಾದ್ಯಾಪಕ ಪಂಡಿತ್ ಅವರಿಗೆ ರವಾನಿಸಿರುವುದು ಅರಿವಿಗೆ ಬಂದಿತು. ಹೀಗೆ ಹುಡುಕಾಟ ನಡೆಸಿದಾಗ ಕೊನೆಗೆ ಸಿದ್ದಲಿಂಗೇಶ್ವರ ವಸ್ತ್ರದ ಅವರ ವಿರುದ್ಧ ಎಸ್ ಆರ್ ಶಿರೂಡ್ಕರ್ ಅವರು ಮೂಕ ಅರ್ಜಿಗಳ ಬಾಣ ಬಿಡುತ್ತಿರುವುದು ಖಚಿತವಾಯಿತು.
ಈ ಎಲ್ಲಾ ಹಿನ್ನಲೆ ಸಿದ್ದಲಿಂಗೇಶ್ವರ ವಸ್ತ್ರದ ಅವರು ಅಂಕೋಲಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ನಂತರ ನ್ಯಾಯಾಲಯಕ್ಕೆ ಹೋಗಿ ತಮ್ಮ ಸಮಸ್ಯೆ ಬಗ್ಗೆ ತಿಳಿಸಿದರು. ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.







