ಶಿರಸಿ ಬಿಸಿಲಕೊಪ್ಪದ ಸೂರ್ಯ ನಾರಾಯಣ ಹೈಸ್ಕೂಲಿನಲ್ಲಿ ಕಳ್ಳತನ ನಡೆದಿದೆ. ಶಾಲೆಯ ಮುಖ್ಯ ಗೇಟು, ಕೊಠಡಿಗೆ ಹಾಕಿದ್ದ ಬೀಗ ಹಾಗೂ ಡ್ರಾವರಿನ ಭದ್ರತೆಯನ್ನು ಮೀರಿ ಕಳ್ಳರು ಹಣ ಎಗರಿಸಿದ್ದಾರೆ!
ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಗಣೇಶ ಭಟ್ಟ ಅವರು ಫೆ 13ರ ಸಂಜೆ ತಮ್ಮ ಕೊಠಡಿಯ ಡ್ರಾವರ್’ಗೆ ಬೀಗ ಹಾಕಿದ್ದರು. ಅದಾದ ನಂತರ ಕೊಠಡಿಗೂ ಬೀಗ ಹಾಕಿ ಶಿರಸಿ ಆದರ್ಶ ನಗರದಲ್ಲಿರುವ ಮನೆಗೆ ಹೋಗಿದ್ದರು. ರಾತ್ರಿ 8.30ಕ್ಕೆ ಶಾಲೆಯ ಜವಾನ ಎಲ್ಲಾ ಕೊಠಡಿಗೂ ಬೀಗ ಹಾಕಿ, ಮುಖ್ಯ ಗೇಟನ್ನು ಸಹ ಭದ್ರಪಡಿಸಿದ್ದರು.
ಫೆ 14ರಂದು ಬೆಳಗ್ಗೆ ಗಣೇಶ ಭಟ್ಟ ಅವರು ತಮ್ಮ ಕೊಠಡಿ ಪ್ರವೇಶಿಸಿದಾಗ ಅಲ್ಲಿದ್ದ ಮೂರು ಡ್ರಾವರ್ ಪೈಕಿ ಎರಡು ಡ್ರಾವರ್ ಒಡೆದಿದ್ದವು. ಹತ್ತಿರ ಹೋಗಿ ನೋಡಿದಾಗ ಅದರಲ್ಲಿರಿಸಿದ್ದ 12150ರೂ ಕಳ್ಳತನವಾಗಿತ್ತು. ಆದರೆ, ಕೊಠಡಿಗೆ ಹಾಕಿದ್ದ ಬೀಗ ಮಾತ್ರ ಹಾಗೇ ಇತ್ತು. ಈ ಬಗ್ಗೆ ಪರಿಶೀಲಿಸಿದಾಗ ಕಳ್ಳರು ಶಾಲೆಯ ಹಂಚು ತೆಗೆದು ಒಳ ನುಗ್ಗಿರುವುದು ಗಮನಕ್ಕೆ ಬಂದಿತು.
ಶಾಲೆಯ ಮೇಲ್ಚಾವಣಿ ಮುರಿದ ಕಳ್ಳರು ಮುಖ್ಯಾಧ್ಯಾಪಕರ ಕೊಠಡಿ ಒಳಗೆ ನುಗ್ಗಿ ಅಲ್ಲಿನ ಡ್ರಾವರ್’ಗೆ ಕೈ ಹಾಕಿದ್ದರು. ಡ್ರಾವರ್ ಬೀಗ ಹಾಕಿರುವುದನ್ನು ಅರಿತು ಕಬ್ಬಿಣದ ಟೇಬಲ್ ಮೀಟಿ ಬೀಗ ಮುರಿದಿದ್ದರು. ಅದಾದ ನಂತರ ಅಲ್ಲಿದ್ದ ಹಣ ಅಪಹರಿಸಿ ಪರಾರಿಯಾಗಿದ್ದರು. ಈ ಎಲ್ಲಾ ವಿಷಯದ ಬಗ್ಗೆ ಗಣೇಶ ಭಟ್ಟ ಅವರು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ತೆರಳಿ ವರದಿ ಒಪ್ಪಿಸಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಕಳ್ಳರ ಹುಡುಕಾಟ ನಡೆಸಿದ್ದಾರೆ.







