ಅಗ್ನಿ ಅವಘಡ ಪತ್ತೆಗಾಗಿ ಮುಂಡಗೋಡು ಅರಣ್ಯ ವಲಯಕ್ಕೆ ಸರ್ಕಾರ ಡ್ರೋಣ್ ಕ್ಯಾಮರಾ ನೀಡಿದೆ. ಆದರೆ, ಡ್ರೋಣ್ ಕ್ಯಾಮರಾ ಹಾರಿಸಲು ಪರಿಣಿತಿಪಡೆದ ಸಿಬ್ಬಂದಿ ಇಲಾಖೆಯಲ್ಲಿಲ್ಲ!
ಅರಣ್ಯ ಸುರಕ್ಷತೆಗೆ ನೆರವಾಗಲು ಅರಣ್ಯ ಇಲಾಖೆಗೆ ಗುಣಮಟ್ಟದ ಡ್ರೋಣ್ ನೀಡಲಾಗಿದೆ. ಬೇಸಿಗೆ ಸಮಯದಲ್ಲಿ ಅರಣ್ಯದಲ್ಲಿ ಬೆಂಕಿ ಬೀಳುವುದು ಸಾಮಾನ್ಯವಾಗಿದ್ದು, ಅದರ ಪತ್ತೆಗಾಗಿ ಈ ಡ್ರೋಣ್ ಬಳಕೆಯಾಗಬೇಕಿದೆ. ಆದರೆ, ಡ್ರೋಣ್ ಹಾರಾಟಕ್ಕೆ ಅರಣ್ಯ ಸಿಬ್ಬಂದಿಗೆ ತರಬೇತಿ ನೀಡಿದವರಿಲ್ಲ. ತರಬೇತಿ ಇಲ್ಲದೇ ಡ್ರೋಣ್ ಹಾರಿಸಿ ಅವಘಡವಾದರೆ ಯಾರು ಹೊಣೆ? ಎಂದು ಸಿಬ್ಬಂದಿ ಸಹ ಅದರ ಬಳಕೆ ಮಾಡುತ್ತಿಲ್ಲ.
ಗುಂಜಾವತಿ ಗುಡ್ಡಕ್ಕೆ ಬೆಂಕಿ ಬಿದ್ದಾಗ ಈ ಡ್ರೋಣ್ ಬಳಕೆಯಾಗಿಲ್ಲ. ಗಣೇಶ ನಗರದ ಲಕ್ಷ್ಮಿಗುಡಿ ಹಿಂದಿನ ಅರಣ್ಯಕ್ಕೆ ಬೆಂಕಿ ತಗುಲಿದಾಗಲೂ ಡ್ರೋಣ್ ಕೆಲಸಕ್ಕೆ ಬಂದಿಲ್ಲ. ಒಮ್ಮೆ ಮಾತ್ರ ಟೆಕ್ನಿಶಿಯನ್ ಆಗಮಿಸಿ ಡ್ರೋಣ್ ಹಾರಾಟ ನಡೆಸಿದ್ದಾರೆ. ಅದನ್ನು ನೋಡಿ ಎಲ್ಲರೂ ಚಪ್ಪಾಳೆ ತಟ್ಟಿದ್ದಾರೆ. ಅದಾಗಿ ಒಂದು ತಿಂಗಳು ಕಳೆದರೂ ಡ್ರೋಣ್ ಬಳಸುವ ವಿಧಾನದ ಬಗ್ಗೆ ತರಬೇತಿ ನೀಡಲು ಯಾರೂ ತಲೆಕೆಡಿಸಿಕೊಂಡಿಲ್ಲ.
`ಅತ್ತಿವೇರಿ ಪಕ್ಷಿಧಾಮದಲ್ಲಿ ವಲಸೆ ಬರುವ ಪಕ್ಷಿಗಳ ಚಲನ-ವಲನ ನೋಡಲು ಒಮ್ಮೆ ಡ್ರೋಣ್ ಬಳಕೆ ಕಾರ್ಯ ನಡೆದಿತ್ತು. ಆಗ ಸಹ ಟೆಕ್ನಿಶಿಯನ್ ಆಗಮಿಸಿ ಡ್ರೋಣ್ ಹಾರಿಸಿದ್ದರು. ಈ ವಾರ ಮತ್ತೆ ಅವರು ಆಗಮಿಸಿ, ತರಬೇತಿ ನೀಡಲಿದ್ದಾರೆ’ ಎಂಬುದು ಅಧಿಕಾರಿಗಳ ಮಾತು.







