ಜೊಯಿಡಾ ರಾಮನಗರದ ಬಳಿ ಸರಾಯಿ ನಶೆಯಲ್ಲಿ ಕಾರು ಓಡಿಸಿದ ಸೂರಜ್ ನಿಮಸ್ತೆ ಎಂಬಾತ ಭದ್ರತಾ ಸಿಬ್ಬಂದಿ ವಿನಾಯಕ ಗವಾಳಕರ್ ಅವರ ಸ್ಕೂಟಿಗೆ ತಮ್ಮ ವಾಹನ ಗುದ್ದಿದ್ದಾರೆ. ಪರಿಣಾಮ ವಿನಾಯಕ ಗವಾಳಕರ್ ಜೊತೆ ಮಾರುತಿ ಮಡಿವಾಳ ಎಂಬಾತರಿಗೂ ಗಾಯವಾಗಿದೆ.
ಜೊಯಿಡಾ ರಾಮನಗರ ಸೀತಾವಾಡದ ವಿನಾಯಕ ಗವಾಳಕರ್ ಅವರು ಕೆಪಿಟಿಸಿಐಎಲ್’ನ ಭದ್ರತಾ ಸಿಬ್ಬಂದಿ. ಅವರು ಮಾರ್ಚ 15ರ ರಾತ್ರಿ ತಮ್ಮ ಸ್ಕೂಟಿಯಲ್ಲಿ ಗಣೇಶಗುಡಿ ಕಡೆ ಹೊರಟಿದ್ದರು. ಗಣೇಶಗುಡಿಯ 4ನೇ ಗೇಟಿನಿಂದ ಹೊರಬಂದ ಕಾರು ಹಂಸಾ ಕ್ರಾಸಿನ ಬಳಿ ವಿನಾಯಕ ಗವಾಳಕರ್ ಅವರಿಗೆ ಡಿಕ್ಕಿಯಾಯಿತು.
ಆ ಕಾರಿನ ಒಳಗಿದ್ದ ಚಾಲಕ ಸೂರಜ್ ನಿಮಸ್ತೆ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಸರಿಯಾಗಿ ಕಾರು ಓಡಿಸಲು ಸಾಧ್ಯವಾಗದಷ್ಟು ಅವರು ಮದ್ಯ ಸೇವಿಸಿದ್ದರು. ವೇಗವಾಗಿ ಕಾರು ಓಡಿಸಿಕೊಂಡು ಬಂದು ಗುದ್ದಿದ ರಭಸಕ್ಕೆ ವಿನಾಯಕ ಗವಾಳಕರ್ ಜೊತೆ ಸ್ಕೂಟಿಯಲ್ಲಿದ್ದ ಮಾರುತಿ ಮಡಿವಾಳ ಸಹ ಪೆಟ್ಟು ಮಾಡಿಕೊಂಡರು.
ಈ ಅಪಘಾತದ ಬಗ್ಗೆ ವಿನಾಯಕ ಗವಾಳಕರ್ ರಾಮನಗರ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.






