ಕಾರವಾರಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಜಿ ಪರಮೇಶ್ವರ ಅವರಿಗೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಅಪ್ಪೆಮಿಡಿಯ ಉಪ್ಪಿನಕಾಯಿ ನೀಡಿದ್ದಾರೆ. ಇದರೊಂದಿಗೆ ಜೇನುತುಪ್ಪವನ್ನು ನೀಡಿ ಉಪಚರಿಸಿದ್ದಾರೆ. ಅದಾದ ನಂತರ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಅಧಿಕಾರ ದುರುಪಯೋಗದ ವಿರುದ್ಧ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದಾರೆ!
`ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ಒಳ್ಳೆಯ ರೀತಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ಅವಧಿ ಪೂರ್ಣ ವರ್ಗಾಯಿಸಬಾರದು’ ಎಂಬುದು ಜನಶಕ್ತಿ ವೇದಿಕೆಯ ಮೊದಲ ಬೇಡಿಕೆ. `ಮುಂಡಗೋಡದಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಅಮಾಯಕನಿಗೆ ಶಿಕ್ಷೆ ಆಗದಂತೆ ತಡೆಯಲು ಸರಿಯಾದ ತನಿಖೆ ನಡೆಯಬೇಕು’ ಎಂಬುದು ಮಾಧವ ನಾಯಕ ಅವರ ಹಕ್ಕೊತ್ತಾಯ.
ಈ ಎರಡು ವಿಷಯಗಳ ಬಗ್ಗೆ ಅವರು ಲಿಖಿತವಾಗಿ ಬರೆದು ಕೊಟ್ಟಿದ್ದಾರೆ. `ಬಹಳ ವರ್ಷಗಳ ನಂತರ ಉತ್ತರ ಕನ್ನಡ ಜಿಲ್ಲೆಗೆ ಉತ್ತಮ ಪೊಲೀಸ್ ವರಿಷ್ಠಾಧಿಕಾರಿ ಆಗಮಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ತಪ್ಪು ಮಾಡಿದ ಅನೇಕರನ್ನು ಅವರು ಅಮಾನತು ಮಾಡಿದ್ದಾರೆ. ಅವ್ಯವಹಾರ, ಅಕ್ರಮಗಳಿಗೆ ಎಂ ನಾರಾಯಣ ಅವರು ಕಡಿವಾಣ ಹಾಕುತ್ತಿದ್ದು, ಕನಿಷ್ಠ ಎರಡು ವರ್ಷಗಳ ಕಾಲ ಅವರನ್ನು ಈ ಜಿಲ್ಲೆಯಲ್ಲಿ ಮುಂದುವರೆಸಬೇಕು’ ಎಂದು ಮಾಧವ ನಾಯಕ ಅವರು ಗೃಹ ಸಚಿವರಿಗೆ ಒತ್ತಾಯಿಸಿದ್ದಾರೆ.
`ಜಿಲ್ಲೆಗೆ ಬಂದ ಪ್ರಾಮಾಣಿಕ ಅಧಿಕಾರಿಗಳೆಲ್ಲ ಅವಧಿ ಪೂರ್ವ ವರ್ಗವಾಗುತ್ತಿದ್ದಾರೆ. ಹೀಗಾಗಿ ಎಂ ನಾರಾಯಣ ಅವರು ಅವಧಿ ಪೂರ್ವ ವರ್ಗ ಆಗದಂತೆ ನೋಡಿಕೊಳ್ಳಬೇಕು’ ಎಂದು ಗೃಹ ಸಚಿವರಲ್ಲಿ ಮಾಧವ ನಾಯಕರು ಹೇಳಿದ್ದಾರೆ. ಏಕಾಏಕಿ ವರ್ಗಾವಣೆ ನಡೆದರೆ ಜಿಲ್ಲೆಯಲ್ಲಿ ಮತ್ತೆ ಅಕ್ರಮ ಚಟುವಟಿಕೆಗಳು ತಲೆಯೆತ್ತಲಿರುವ ಬಗ್ಗೆಯೂ ಅವರು ಎಚ್ಚರಿಸಿದ್ದಾರೆ.
ಮಹಿಳಾ ಅಧಿಕಾರಿ ವಿರುದ್ಧ ದೂರು!
`2025ರ ಜನವರಿ 18ರ ರಾತ್ರಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಸಂಬoಧಿಕರ ಕಾರು ಮುಂಡಗೋಡದಲ್ಲಿ ಅಪಘಾತವಾಗಿದೆ. ಆದರೆ, ಆ ಕಾರಿಗೆ ಇನ್ಸುರೆನ್ಸ ಇರಲಿಲ್ಲ. ಇನ್ಸುರೆನ್ಸ ಆಸೆಗಾಗಿ ಮಹಿಳಾ ಪೊಲೀಸ್ ಅಧಿಕಾರಿ ತಮ್ಮ ಪ್ರಭಾವ ದುರುಪಯೋಗಪಡಿಸಿಕೊಂಡು ಅಮಾಯಕನನ್ನು ಈ ಪ್ರಕರಣದಲ್ಲಿ ಎಳೆದು ತಂದಿದ್ದಾರೆ’ ಎಂದು ಮಾಧವ ನಾಯಕ ಅವರು ಗೃಹ ಸಚಿವರಿಗೆ ದೂರು ನೀಡಿದ್ದಾರೆ.
`ಆ ದಿನ ಕಾರಿಗೆ ಟಾಟಾ ಎಸ್ ವಾಹನ ಡಿಕ್ಕಿ ಹೊಡೆದಿದೆ ಎಂದು ಪ್ರಕರಣ ದಾಖಲಿಸಲಾಗಿದೆ. ಸಾಂದರ್ಬಿಕ ಸಾಕ್ಷಿಗಳನ್ನು ಪರಿಗಣಿಸಿದಾಗ ಟಾಟಾ ಎಸ್ ವಾಹನ ಡಿಕ್ಕಿ ಹೊಡೆಯದಿರುವುದು ಸಾಭೀತಾಗುತ್ತದೆ. ಕಿಲ್ಲೆ ಓಣಿಯ ಹಜರತ್ ಅಲಿ ಎಂಬಾತರನ್ನು ಈ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗಿದ್ದು, ಅಧಿಕಾರಿಯ ದುರ್ವತನೆಯಿಂದ ಅಮಾಯಕನಿಗೆ ಶಿಕ್ಷೆ ಆಗುವುದನ್ನು ತಪ್ಪಿಸಬೇಕು’ ಎಂದು ಮಾಧವ ನಾಯಕ ಆಗ್ರಹಿಸಿದ್ದಾರೆ. ಜನಶಕ್ತಿ ವೇದಿಕೆ ಸಂಘಟನಾ ಕಾರ್ಯದರ್ಶಿ ನಿತ್ಯಾನಂದ ನಾಯ್ಕ, ಸೂರಜ ಕುರ್ಮಕರ್ ಜೊತೆಯಿದ್ದರು.







