ಮಾಲ್ಕಿ ಕ್ಷೇತ್ರದ ಜೊತೆ ಅರಣ್ಯ ಭೂಮಿಯನ್ನು ಅತಿಕ್ರಮಿಸಿ ಗುಡ್ಡ ಕೊರೆದ ಬಗ್ಗೆ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ತಕರಾರು ಅರ್ಜಿ ಸಲ್ಲಿಕೆಯಾಗಿದೆ.
ಯಲ್ಲಾಪುರ ತಹಶೀಲ್ದಾರ್ ಕಚೇರಿಯ ಮೂಲಕ ಬಾಳಗಿಮನೆಯ ಮಂಜುನಾಥ ಹೆಗಡೆ, ಶಮಶುದ್ದೀನ ಮಾರಕರ ಹಾಗೂ ಪ್ರೇಮಾನಂದ ನಾಯ್ಕ ಎಂಬಾತರು ತಕರಾರು ಅರ್ಜಿ ಸಲ್ಲಿಸಿದ್ದಾರೆ. ಎತ್ತರದ ಗುಡ್ಡವನ್ನು ಕತ್ತರಿಸಿದ್ದರಿಂದ ಭೂ ಕುಸಿತದ ಆತಂಕವಿರುವ ಬಗ್ಗೆ ಅವರು ಎಚ್ಚರಿಸಿದ್ದಾರೆ.
ಯಲ್ಲಾಪುರ ತಾಲೂಕಿನ ಹುಟಕಮನೆ ಗ್ರಾಮದ ಸರ್ವೇ ನಂ 61/6 ಖಾಸಗಿ ಮಾಲಿಕತ್ವದ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿನ ಗುಡ್ಡವನ್ನು ಕಟಾವು ಮಾಡಲಾಗಿದ್ದು, ಜೊತೆಗೆ ಕೆಲ ಅರಣ್ಯ ಭಾಗವನ್ನು ತುಂಡರಿಸಲಾಗಿದೆ. ಗುಡ್ಡ ಜಾಗವನ್ನು ಸಮದಟ್ಟು ಮಾಡಿದ್ದರಿಂದ ಮಳೆಗಾಲದಲ್ಲಿ ಕುಸಿತವಾಗುವ ಸಾಧ್ಯತೆಯಿದೆ ಎಂಬುದು ಅರ್ಜಿದಾರರ ದೂರು.
`ಆ ಕ್ಷೇತ್ರದಲ್ಲಿದ್ದ ಮರಗಳನ್ನು ಬುಡಸಹಿತವಾಗಿ ಕೀಳಲಾಗಿದೆ. ಮಣ್ಣನ್ನು ಬೇರೆ ಕಡೆ ಸಾಗಿಸಲಾಗಿದೆ. ಈ ರೀತಿ ಗುಡ್ಡ ಕೊರೆದಲ್ಲಿ ಮಳೆಗಾಲದಲ್ಲಿ ಭೂ ಕುಸಿತ ಸಾಧ್ಯತೆಯಿದೆ’ ಎಂದವರು ಆಕ್ಷೇಪಿಸಿದ್ದಾರೆ.







