ಅಂಕೋಲಾದಲ್ಲಿ ಆಟೋ ಓಡಿಸಿಕೊಂಡಿರುವ ಪ್ರವೀಣ ಬೋವಿ ಅವರ ಮೇಲೆ ಮಾರಕಾಸ್ತçಗಳಿಂದ ಹಲ್ಲೆ ನಡೆದಿದೆ. ಕತ್ತಿ ಬೀಸಿದಾಗ ತಪ್ಪಿಸಿಕೊಂಡಿದ್ದರಿAದ ಅವರು ಜೀವಾಪಾಯದಿಂದ ಪಾರಾಗಿದ್ದಾರೆ.
26 ವರ್ಷದ ಪ್ರವೀಣ ಬೋವಿ ಅಂಕೋಲಾದ ಬೊಬ್ರುವಾಡದವರು. ಆಟೋ ಚಾಲಕರಾಗಿ ಬದುಕು ಕಟ್ಟಿಕೊಂಡಿರುವ ಅವರು ರಾತ್ರಿ ವೇಳೆಯೂ ಸಂಚಾರದಲ್ಲಿರುತ್ತಾರೆ. ಮೇ 7ರ ರಾತ್ರಿ 10 ಗಂಟೆಯ ಆಸುಪಾಸಿನಲ್ಲಿ ಅವರು ಪೂಜಗೇರಿ ರಸ್ತೆಯ ಕಡೆ ಹೋಗಿದ್ದರು. ಎಂಎಸ್ಐಎಲ್ ಮಳಿಗೆ ಬಳಿ ಅವರ ಮೇಲೆ ಆಕ್ರಮಣ ನಡೆಯಿತು.
ಬೊಬ್ರುವಾಡದ ಪ್ರಶಾಂತ ನಾಯ್ಕ ಹಾಗೂ ತೆಂಗಿನಗೇರಿಯ ಕಿರಣ ನಾಯ್ಕ ಅವರು ಪ್ರವೀಣ ಬೋವಿ ಅವರನ್ನು ಅಡ್ಡಗಟ್ಟಿದರು. ಪ್ರಶಾಂತ ನಾಯ್ಕ ಅವರ ಸ್ಕೂಟಿಯಲ್ಲಿ ಕತ್ತಿ ಕಂಡು ಪ್ರವೀಣ ಬೋವಿ ಬೆದರಿದರು. ಅದಾಗಿಯೂ ಎದುರಾದವರಲ್ಲಿ `ಏನು?’ ಎಂದು ಪ್ರಶ್ನಿಸಿದಾಗ ಅವರಿಬ್ಬರೂ ಸೇರಿ ಕತ್ತಿ ಬೀಸಿದರು. ಬೀಸುವ ಕತ್ತಿಯಿಂದ ತಪ್ಪಿಸಿಕೊಂಡರೂ ಅವರ ತಲೆಗೆ ತಾಗಿತು.
ಆಗ, ಆ ಇಬ್ಬರು ಸೇರಿ ಪ್ರವೀಣ ಬೋವಿ ಅವರ ಬೆನ್ನ ಮೇಲೆ ಗುದ್ದಿದರು. ಪ್ರವೀಣ ಬೋವಿ ಅವರನ್ನು ನೆಲಕ್ಕೆ ಬೀಳಿಸಿ ತುಳಿದರು. ಆಗ ಅಲ್ಲಿದ್ದ ಜನ ಈ ಹೊಡೆದಾಟ ತಪ್ಪಿಸಿದರು. `ಮತ್ತೊಮ್ಮೆ ಸಿಕ್ಕಾಗ ಕತ್ತಿಯಿಂದ ಕಡಿಯುವೆ’ ಎಂದು ಬೆದರಿಸಿದ ಪ್ರಶಾಂತ ಹಾಗೂ ಕಿರಣ ಅಲ್ಲಿಂದ ಪರಾರಿಯಾದರು. ಗಾಯಗೊಂಡ ಪ್ರವೀಣ ಬೋವಿ ಪೊಲೀಸರಲ್ಲಿ ತೆರಳಿ ನೆರವು ಯಾಚಿಸಿದರು.
ಜೀವ ಬೆದರಿಕೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿತರಿಬ್ಬರ ವಿಚಾರಣೆ ನಡೆಸಿದ್ದಾರೆ. ಪ್ರವೀಣ ಬೋವಿ ಅವರಿಗೂ ಧೈರ್ಯ ತುಂಬಿದ್ದಾರೆ.







