1600 ವರ್ಷಗಳ ಹಿಂದೆಯೇ ಭಾರತದಲ್ಲಿ ಹಡಗುಗಳಿದ್ದು, ಅದೇ ಮಾದರಿಯಲ್ಲಿ ಕೇಂದ್ರ ಸರ್ಕಾರ ಹೊಸ ಹಡಗು ಸಿದ್ಧಪಡಿಸಿದೆ! ಈ ಹಡಗಿಗೆ ಪ್ರಾಚೀನ ಸಮುದ್ರಯಾನ ಸಂಪ್ರದಾಯದ ಜೊತೆ ಅತ್ಯಾಧುನಿಕ ಹಾಗೂ ವೈಜ್ಞಾನಿಕ ತಂತ್ರಜ್ಞಾನದ ಜೊತೆ ಸಂಯೋಜಿಸಲಾಗಿದೆ. ಈ ಹಡಗಿಗೆ ಐಎನ್ಎಸ್ ಕೌಂಡಿನ್ಯ ಎಂದು ಹೆಸರಿಡಲಾಗಿದ್ದು, ಐಎನ್ಎಸ್ ಕೌಂಡಿನ್ಯ ಹಡಗನ್ನು ಬುಧವಾರ ಕಾರವಾರದಲ್ಲಿ ಲೋಕಾರ್ಪಣೆ ಮಾಡಲಾಗಿದೆ.
5ನೇ ಶತಮಾನದ ಅಜಂತಾ ಗುಹೆಯ ವರ್ಣಚಿತ್ರದಲ್ಲಿರುವ ವಿಶಿಷ್ಟ ಹಡಗನ್ನು ನೋಡಿ ಸ್ವದೇಶಿ ಮಾದರಿಯ ಹಡಗು ನಿರ್ಮಿಸಲಾಗಿದೆ. ಕೇಂದ್ರ ಸಂಸ್ಕೃತಿ ಸಚಿವಾಲಯ, ಭಾರತೀಯ ನೌಕಾಪಡೆ ಮತ್ತು ಗೋವಾದ ಮೆ/ಎಸ್ ಹೊಡಿ ಇನ್ನೋವೇಶನ್ಸ್ ಜೊತೆಗೂಡಿ ಈ ಹಡಗು ನಿರ್ಮಿಸಿದೆ. ಸಾಂಪ್ರದಾಯಿಕ ತೆಂಗಿನ ನಾರಿನ ಹೊಲಿಗೆ ತಂತ್ರಗಳನ್ನು ಬಳಸಿ ಮಾಸ್ಟರ್ ಶಿಪ್ ರೈಟ್ ಶ ಬಾಬು ಶಂಕರನ್ ಅವರು ಈ ಹಡಗು ನಿರ್ಮಿಸಿದ್ದಾರೆ. ಭಾರತೀಯ ನೌಕಾಪಡೆ ಮತ್ತು ಐಐಟಿ ಮದ್ರಾಸ್ ಹಡಗಿನ ವಿನ್ಯಾಸಬಳಸಿದ ಈ ಹಡಗು ಸಮುದ್ರ ಪಯಣಕ್ಕೆ ಸಿದ್ಧವಾಗಿದೆ.
ಕಾರವಾರದ ಕದಂಬ ನೌಕಾನೆಲೆಯಲ್ಲಿ ಐಎನ್ಎಸ್ವಿ ಕೌಂಡಿನ್ಯ ಹಡಗು ಲೋಕಾರ್ಪಣೆ ಮಾಡಿದ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಭಾರತದಲ್ಲಿ 5ನೇ ಶತಮಾನದಲ್ಲಿ ಇದ್ದಂತಹ ಹಡಗಿನ ಬಗ್ಗೆ ಮಾತನಾಡಿದ್ದಾರೆ. `ಇತಿಹಾಸದ ಸಾಧನೆಯ ಪ್ರತೀಕವಾಗಿ ಸ್ಥಳೀಯವಾಗಿ ದೊರೆಯುವ ಅಗತ್ಯ ಪರಿಕರಗಳನ್ನು ಬಳಸಿಕೊಂಡು ಶತಮಾನಗಳ ಹಿಂದೆ ನಮ್ಮ ಪೂರ್ವಜರು ತಯಾರಿಸಿದ್ದ ಹಡಗನ್ನು ಮರು ನಿರ್ಮಾಣ ಮಾಡಿ, ಕಾರವಾರದ ನೌಕಾನೆಲೆಯಲ್ಲಿ ಅದರ ಸಂಚಾರಕ್ಕೆ ಚಾಲನೆ ನೀಡಿರುವುದು ಐತಿಹಾಸಿಕ ಕ್ಷಣವಾಗಿದೆ’ ಎನ್ನುತ್ತ ಅವರು ಭಾವುಕರಾಗಿದ್ದಾರೆ. `ಭಾರತವು ತನ್ನ ವೈಭವದ ಇತಿಹಾಸವನ್ನು ಪುನಃ ಬರೆಯಲಿದ್ದು, ಪ್ರಧಾನ ಮಂತ್ರಿಯವರ ವಿಕಸಿತ ಭಾರತದ ಪರಿಕಲ್ಪನೆಯಲ್ಲಿ ಭಾರತವು ತನ್ನ ವೈಭವದ ಭೂತಕಾಲ ಮತ್ತು ಇತಿಹಾಸದೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಅಭಿವೃದ್ಧಿಯತ್ತ ನಡೆದಿದೆ’ ಎಂದು ಹೇಳಿದ್ದಾರೆ.
`ಭಾರತವು ಅದ್ಭುತವಾದ ಇತಿಹಾಸ ಹೊಂದಿದೆ. ಸಾವಿರಾರು ವರ್ಷಗಳ ಕಾಲ, ಭಾರತದ ಸಂಪತ್ತು, ಜ್ಞಾನ, ವಿಜ್ಞಾನವು ಅಗಾಧವಾಗಿದೆ. ಜ್ಞಾನ ಮತ್ತು ವಿಜ್ಞಾನದ ದೃಷ್ಟಿಕೋನದಿಂದ ಇಡೀ ಜಗತ್ತಿಗೆ ಆಕರ್ಷಣೀಯ ಕೇಂದ್ರವಾಗಿತ್ತು. ಭಾರತವನ್ನು ತಿಳಿದುಕೊಳ್ಳಲು, ಗುರುತಿಸಲು, ನೋಡಲು, ಭಾರತದಿಂದ ಕಲಿಯಲು ವಿಶ್ವದ ಅನೇಕ ಜನರು ಭಾರತಕ್ಕೆ ಬಂದರು. ಸಾವಿರಾರು ವರ್ಷಗಳ ದಾಳಿಗಳು ಮತ್ತು ಪ್ರಯತ್ನಗಳ ಹೊರತಾಗಿಯೂ, ನಮ್ಮ ಶ್ರೇಷ್ಠ ಸಂಸ್ಕೃತಿ ಕೊನೆಗೊಂಡಿಲ್ಲ. ಶಾಶ್ವತವಾಗಿದ್ದ ಆ ಪ್ರಭಾವವನ್ನು ಮುರಿಯಲು, ಆ ಪ್ರಭಾವವನ್ನು ಕೊನೆಗೊಳಿಸಲು, ಸಾಧ್ಯವಾಗಲಿಲ್ಲ ಇದು ನಮ್ಮ ಸಂಸ್ಕೃತಿಯ ಮೇಲೆ ನಾವು ಹೆಮ್ಮೆಪಡುವ ಸಂಗತಿಯಾಗಿದೆ’ ಎಂದವರು ಈ ವೇಳೆ ಮಾತನಾಡಿದ್ದಾರೆ.
`ಭಾರತದ ಪ್ರಗತಿಯನ್ನು ತಡೆಯಲು ಭಾರತದಲ್ಲಿ ಅಶಾಂತಿ ಹರಡಲು ಮತ್ತು ನಮ್ಮನ್ನು ನೈತಿಕವಾಗಿ ಕೆಳಕ್ಕೆ ಇಳಿಸಲು ಯೋಜಿತ ಉದ್ದೇಶದಿಂದ ಕೆಲವು ಜನರು ಕೆಲವು ಘಟನೆಗಳನ್ನು ನಡೆಸುತ್ತಾರೆ. ಪೆಹಲ್ಗಾಮನಲ್ಲಿ ನಡೆದ ಭಯೋತ್ಪಾದಕರದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನಾ ಪಡೆಗಳ ಮೂರು ವಿಭಾಗಗಳು ಒಟ್ಟಾಗಿ ಸೇರಿ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ಮಾಡುವ ಮೂಲಕ ಇಡೀ ವಿಶ್ವಕ್ಕೆ ಭಾರತದ ಶಕ್ತಿ ಏನು ಎಂಬುದನ್ನು ತೋರಿಸಿದೆ. ಭಾರತೀಯ ಸೇನೆಯು ತನ್ನ ಶಕ್ತಿ, ಭದ್ರತೆ ಮತ್ತು ಕೌಶಲ್ಯಪೂರ್ಣ ಸಂಯೋಜನೆಯನ್ನು ಪ್ರದರ್ಶಿಸಿದೆ. ಇದನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ. ಭಾರತವು ಎಲ್ಲಾ ಭಯೋತ್ಪಾದಕರನ್ನು ಎದುರಿಸುವ ಶಕ್ತಿಯನ್ನು ಪಡೆದುಕೊಂಡಿದೆ’ ಎಂದವರು ಜನತೆಗೆ ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಯವರ ಆರ್ಥಿಕ ಸಲಹೆಗಾರ ಸಂಜಯ ಸಾನಿಯಾಲ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವೈಸ್ ಅಡ್ಮಿರಲ್ ರಾಜಾರಾಮ ಸ್ವಾಮಿನಾಥನ್ ರಿಯರ್ ಅಡ್ಮಿರಲ್ ಕೆ ಎಂ ರಾಮಕೃಷ್ಣನ್, ನಿವೃತ್ತ ಚೀಪ್ ಅಡ್ಮಿರಲ್ ಕರಣಬೀರ್ ಸಿಂಗ್ ಮತ್ತಿತರರು ಇದ್ದರು.