ಪರಿಸರ ಪ್ರವಾಸೋದ್ಯಮದ ಬಗ್ಗೆ ನೂರಾರು ಕನಸು ಕಂಡಿರುವ ನ್ಯಾಯವಾದಿ ನಾಗರಾಜ ನಾಯಕ ಅವರು ಮಾವಿನ ಮೇಳದ ಮೂಲಕ ಪ್ರವಾಸೋದ್ಯಮದ ಇನ್ನೊಂದು ಆಯಾಮ ರಚಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಅಂಕೋಲಾದಲ್ಲಿ ಮಾವು ಮೇಳ ಆಯೋಜಿಸುತ್ತಿರುವ ಅವರು ಮೂರನೇ ವರ್ಷದ ಮೇಳಕ್ಕಾಗಿ ಸಿದ್ಧತೆ ನಡೆಸಿದ್ದಾರೆ.
ಅಂಕೋಲಾದ ಮಾವಿನ ಹಣ್ಣಿಗೆ ದೇಶ-ವಿದೇಶಗಳಲ್ಲಿಯೂ ಬೇಡಿಕೆ ಸೃಷ್ಠಿಸಿದ ಮಾವು ಮೇಳ ಮತ್ತೆ ಬಂದಿದೆ. ಮೇ 24 ಹಾಗೂ 25ರಂದು ಮಾವಿನ ಮೇಳ ನಡೆಯಲಿದೆ. ಪ್ರಸಿದ್ಧ ಕರಿ ಈಶಾಡ ಮಾವಿನ ಜೊತೆ ಬಗೆ ಬಗೆಯ ಮಾವಿನ ಹಣ್ಣುಗಳು ಈ ಮೇಳಕ್ಕೆ ಬರಲಿವೆ. ಇದರೊಂದಿಗೆ ಮಾವಿನ ಹಣ್ಣಿನ ಉಪಯೋಗ, ಇನ್ನಿತರ ಆಹಾರ ಪದಾರ್ಥಗಳ ಬಗ್ಗೆಯೂ ಮೇಳದಲ್ಲಿ ಮಾಹಿತಿ ಸಿಗಲಿದೆ.
ಉತ್ತರ ಕನ್ನಡ ಜಿಲ್ಲೆಯ ಜೊಯಿಡಾದಲ್ಲಿ ಪ್ರತಿ ವರ್ಷ ಗಡ್ಡೆ-ಗೆಣಸಿನ ಮೇಳ ನಡೆಯುತ್ತದೆ. ಶಿರಸಿಯಲ್ಲಿ ಹಲಸಿನ ಮೇಳ ನಡೆಯುತ್ತದೆ. ಸ್ಥಳೀಯ ಉತ್ಪನ್ನಗಳ ಮೌಲ್ಯವರ್ಧನೆಯ ಜೊತೆ ಅದಕ್ಕೆ ಬೇಡಿಕೆ ಸೃಷ್ಠಿಸುವುದು ಈ ಮೇಳದ ಮುಖ್ಯ ಉದ್ದೇಶ. ಅದರಂತೆ, ಎರಡು ವರ್ಷಗಳ ಹಿಂದೆ ಅಂಕೋಲಾದಲ್ಲಿ ಮಾವು ಮೇಳ ಆಯೋಜಿಸಲಾಗಿದ್ದು, ಇಲ್ಲಿನ ಮಾವಿನ ಹಣ್ಣಿಗೆ ದೇಶ-ವಿದೇಶಗಳಿಂದ ಬೇಡಿಕೆ ಬರಲು ಆ ಮೇಳ ಕಾರಣವಾಯಿತು.
ಪಹರೆ ವೇದಿಕೆಯ ನಾಗರಾಜ ನಾಯಕ ಅವರು ಮಾವು ಮೇಳ ನಡೆಸಲು ನಿರ್ಧರಿಸಿದ್ದರು. ಅಲ್ಲಿನ ರೈತರು ಅದಕ್ಕೆ ಕೈ ಜೋಡಿಸಿದರು. ಮಾವು ಮೇಳಕ್ಕೆ ಆಗಮಿಸಿದ ಗಣ್ಯರು ಹಣ್ಣಿನ ಸವಿ ಸವೆದರು. ಮಾವು ಮೇಳದ ಯಶಸ್ಸಿನ ಬಗ್ಗೆ ಎಲ್ಲಾ ಕಡೆ ಹೇಳಿಕೊಂಡರು. ಅದರ ಪರಿಣಾಮ ಬೇರೆ ಬೇರೆ ಭಾಗದ ಜನ ಅಂಕೋಲಾಗೆ ಆಗಮಿಸಿ ಮಾವು ಖರೀದಿಗೆ ಮುಂದಾಗಿದ್ದು, ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ.
ಮಾವು ಬೆಳೆಗಾರರ ಹಾಗೂ ಮಾವು ಪ್ರಿಯರ ನಡುವೆ ಸಂಪರ್ಕ ಬೆಸೆಯುವುದಕ್ಕಾಗಿ ಶುರುವಾದ ಮಾವಿನ ಮೇಳ ತನ್ನ ಗುರಿ ಸಾಧಿಸಿದೆ. ಅದರಲ್ಲಿಯೂ ಮುಖ್ಯವಾಗಿ ಅಂಕೋಲಾದ ಕರಿ ಈಶಾಡು ಮಾವು ನಾನಾ ಭಾಗಗಳಿಗೆ ರಪ್ತಾಗಿದೆ. ಆ ಮೂಲಕ ಅಂಕೋಲೆಯ ಮಾವು ಬೆಳೆಗಾರರಿಗೂ ಉತ್ತೇಜನ ಸಿಕ್ಕಿದೆ. ಈ ವರ್ಷ ಬೆಳೆಗಾರರ ಸಮಿತಿಯಿಂದಲೇ ಮಾವು ಮೇಳ ನಡೆಯಲಿದ್ದು, ಇದಕ್ಕಾಗಿ ಅಂಕೋಲಾದ ಜೈಹಿಂದ್ ಹೈಸ್ಕೂಲ್ ಮೈದಾನ ಸಿದ್ಧವಾಗಿದೆ. ಚಿತ್ರ ನಿರ್ದೇಶಕ ರಾಜೇಂದ್ರಸಿAಗ್ ಬಾಬು, ಪರಿಸರ ಬರಹಗಾರ ಶಿವಾನಂದ ಕಳವೆ, ಸಾಹಿತಿ ಪಾಲ್ಗುಣ ಗೌಡ ಅವರು ಮೇಳದಲ್ಲಿ ಭಾಗವಹಿಸಲಿದ್ದಾರೆ. ವಿವಿಧ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಸಹ ಮಾವಿನ ಸವಿ ಅನುಭವಿಸಲು ಆಗಮಿಸುತ್ತಿದ್ದಾರೆ.
ಈ ಎಲ್ಲದರ ಜೊತೆ ಮಾವಿನ ಹಣ್ಣಿನ ಬೆಳೆಗಾರರು, ಮರ ಹತ್ತುವವರು, ಮಾವಿನ ಕಸಿ ಕಟ್ಟುವವರು ಸೇರಿ ಶ್ರಮಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಾವು ಖರೀದಿಗೂ ಇಲ್ಲಿ ಸಾಕಷ್ಟು ಅವಕಾಶಗಳಿವೆ.
ನೀವು ಬನ್ನಿ… ನಿಮ್ಮವರನ್ನು ಕರೆತನ್ನಿ!







