ತೆಂಗಿನ ಮರದ ಹಕ್ಕಿನ ವಿಷಯವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು, ಈ ಹೊಡೆದಾಟದಲ್ಲಿ ರಕ್ತದ ಮಡುವಿನಲ್ಲಿ ಬಿದ್ದ ಕುಟುಂಬದ ಮುಖ್ಯಸ್ಥರು ಆಸ್ಪತ್ರೆಗೆ ದಾಖಲಾಗುವಷ್ಟರ ಮಟ್ಟಿಗೆ ಗಾಯಗೊಂಡಿದ್ದಾರೆ. ಗಂಡನಿಗೆ ಆದ ಅನ್ಯಾಯದ ವಿರುದ್ಧ ಹೋರಾಟಕ್ಕಾಗಿ ಮನೆ ಮಹಿಳೆಯರು ಪೊಲೀಸ್ ಠಾಣೆ ಮಟ್ಟಿಲೇರಿದ್ದಾರೆ!
ಕುಮಟಾ ತಾಲೂಕಿನ ಸೊಪ್ಪಿನಹೊಸಳ್ಳಿ ಬಳಿಯ ಮೊರ್ಸೆ ಬಳಿ ಹನುಮಂತ ನಾಯ್ಕ ಹಾಗೂ ಮಂಜುನಾಥ ನಾಯ್ಕ ಕುಟುಂಬದವರ ನಡುವೆ ಜಮೀನು ವ್ಯಾಜ್ಯ ನಡೆಯುತ್ತಿದೆ. ಇದೇ ವ್ಯಾಜ್ಯದ ಮುಂದುವರೆದ ಭಾಗವಾಗಿ ಗುರುವಾರ ಬೆಳಗ್ಗೆ ಭಾರೀ ಪ್ರಮಾಣದ ಹೊಡೆದಾಟ ನಡೆದಿದೆ. ಒಬ್ಬರು ಬಡಿಗೆಯಿಂದ ಬಡಿದರೆ ಮತ್ತೊಬ್ಬರು ಕತ್ತಿಯಿಂದ ತಿವಿದಿದ್ದಾರೆ. ಕೊನೆಗೆ ಹನುಮಂತ ನಾಯ್ಕ ಹಾಗೂ ಮಂಜುನಾಥ ನಾಯ್ಕ ಇಬ್ಬರೂ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಈ ದಿನ ಬೆಳಗ್ಗೆ 10.30ರ ಆಸುಪಾಸಿಗೆ ಮಂಜುನಾಥ ನಾಯ್ಕ ಅವರು ತೆಂಗಿನ ಕಾಯಿ ಕೀಳಲು ತೋಟಕ್ಕೆ ಹೋಗಿದ್ದರು. ತೆಂಗು ಕೀಳುವ ಕಾರ್ಮಿಕರು ಅಲ್ಲಿಗೆ ಆಗಮಿಸಿದ್ದರು. ಅದೇ ವೇಳೆ ಹನುಮಂತ ನಾಯ್ಕ ಅವರು ಗದ್ದೆಗೆ ಗೊಬ್ಬರ ಮಾಡಲು ಸೊಪ್ಪು ತರುವ ಕೆಲಸಕ್ಕಾಗಿ ಬೆಟ್ಟದ ಕಡೆ ಹೊರಟಿದ್ದರು. ಈ ವೇಳೆ ಮಂಜುನಾಥ ನಾಯ್ಕ ಹಾಗೂ ಹನುಮಂತ ನಾಯ್ಕರ ನಡುವೆ ಮಾತಿಗೆ ಮಾತು ಬೆಳೆಯಿತು. ಜಮೀನು ವಿಷಯವಾಗಿ ಇಬ್ಬರು ಕೆಟ್ಟದಾಗಿ ಬೈದುಕೊಂಡರು. ಅದಾದ ನಂತರ ಪರಸ್ಪರ ಒಬ್ಬರಿಗೊಬ್ಬರು ಥಳಿಸಿದರು.
ಮೊದಲು ಮಂಜುನಾಥ ನಾಯ್ಕ ಅವರು ತಮ್ಮ ಬಳಿಯಿದ್ದ ಕಟ್ಟಿಗೆಯಿಂದ ಹನುಮಂತ ನಾಯ್ಕರ ತಲೆಗೆ ಬಡಿದರು. ಹನುಮಂತ ನಾಯ್ಕರು ಆಯಾಸಗೊಂಡು ಅಲ್ಲಿ ಕುಳಿತಾಗ ಕಲ್ಲಿನಿಂದ ಜಜ್ಜಿದರು. ಇದಕ್ಕೆ ಪ್ರತಿಯಾಗಿ ಹನುಮಂತ ನಾಯ್ಕರು ಕೈಯಲಿದ್ದ ಸೊಪ್ಪು ಕತ್ತರಿಸುವ ಕತ್ತಿ ಬೀಸಿದರು. ಆಗ, ಮಂಜುನಾಥ ನಾಯ್ಕರು ಸಹ ತಮ್ಮ ಬಳಿಯಿದ್ದ ಕತ್ತಿ ಬೀಸಿದರು. ಪರಿಣಾಮ ಆ ಇಬ್ಬರು ಗಾಯಗೊಂಡು ರಕ್ತದ ಮೊಡವಿನಲ್ಲಿ ಬಿದ್ದರು. ಅದಾದ ನಂತರ ಮಂಜುನಾಥ ನಾಯ್ಕರು ಬೆಣ್ಣೆಹೊಳೆ ಕಡೆ ಓಡಿ ಹೋಗಿದ್ದು, ಅಲ್ಲಿ ಆಯಾಸದಿಂದ ಬಿದ್ದು ಇನ್ನಷ್ಟು ಗಾಯಗೊಂಡರು.
ಈ ಹೊಡೆದಾಟ ಗಲಾಟೆ ಕೇಳಿ ಹನುಮಂತ ನಾಯ್ಕರ ಪತ್ನಿ ಸುಜಾತಾ ನಾಯ್ಕ ಹಾಗೂ ಮಂಜುನಾಥ ನಾಯ್ಕರ ಪತ್ನಿ ಅನಿತಾ ನಾಯ್ಕ ಸಹ ಸ್ಥಳಕ್ಕೆ ಬಂದಿದ್ದರು. ಪರಸ್ಪರ ಅವರು ಒಬ್ಬರನ್ನೊಬ್ಬರು ನಿಂದಿಸಿಕೊ0ಡಿದ್ದು, ಈ ವೇಳೆ ಅದೇ ಊರಿನ ಯೋಗೇಶ ನಾಯ್ಕ ಅವರು ಸುಜಾತಾ ನಾಯ್ಕರನ್ನು ಕೆಟ್ಟದಾಗಿ ಬೈದು ನಿಂದಿಸಿದರು. ಹೀಗಾಗಿ ಸುಜಾತಾ ನಾಯ್ಕ ಅವರು ತಮಗೆ ನಿಂದಿಸಿದ ಯೋಗೇಶ ನಾಯ್ಕ, ತಮ್ಮ ಪತಿ ಮೇಲೆ ಹಲ್ಲೆ ನಡೆಸಿದ ಮಂಜುನಾಥ ನಾಯ್ಕರ ವಿರುದ್ಧ ಕುಮಟಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅನಿತಾ ನಾಯ್ಕ ಅವರು ತಮ್ಮ ಪತಿಗೆ ಹೊಡೆದ ಹನುಮಂತ ನಾಯ್ಕ ಹಾಗೂ ಹೊಡೆದಾಟಕ್ಕೆ ಪ್ರೇರೇಪಿಸಿದ ಸುಜಾತಾ ನಾಯ್ಕ ವಿರುದ್ಧವೂ ದೂರು ಕೊಟ್ಟಿದ್ದಾರೆ.
ಆ ಮಹಿಳೆಯರಿಬ್ಬರೂ ಹೇಳಿದ ಕಥೆ ಆಲಿಸಿದ ಕುಮಟಾ ಪಿಎಸ್ಐ ಮಂಜುನಾಥ ಗೌಡರ್ ಅವರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ವರದಿ ಒಪ್ಪಿಸಿದ್ದಾರೆ. ಆ ಇಬ್ಬರು ತಮ್ಮ ಕುಟುಂಬಕ್ಕೆ ಕೊಲೆ ಬೆದರಿಕೆಯಿರುವ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.







