ಅರಣ್ಯ ಅತಿಕ್ರಮಣದಾರರರಿಗೆ ಭೂಮಿ ಹಕ್ಕು ಕೊಡಬೇಕು ಎಂದು ಹೋರಾಟ ನಡೆಸುತ್ತಿರುವ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಈ ವರ್ಷ ಒಂದೇ ದಿನದಲ್ಲಿ 10 ಲಕ್ಷ ಗಿಡ ನೆಡುವ ಯೋಜನೆ ರೂಪಿಸಿದೆ. ಜಿಲ್ಲೆಯ 500ಕ್ಕೂ ಅಧಿಕ ಪ್ರದೇಶದಲ್ಲಿ ಜೂನ್ 21 ಮುಂಜಾನೆ 10ಗಂಟೆಯ ಮುಹೂರ್ತದಲ್ಲಿ 10 ಲಕ್ಷ ಗಿಡ ಭೂಮಿಗೆ ಬೀಳಲಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭೌಗೋಳಿಕವಾಗಿ 10,571 ಚ ಕಿಮೀ ಪ್ರದೇಶ ಹೊಂದಿದೆ. ಅದರಲ್ಲಿ 8400 ಚ ಕಿಮೀ ಪ್ರದೇಶದಲ್ಲಿ ಈಗಾಗಲೇ ಅರಣ್ಯವಿದೆ. ಅರಣ್ಯ ಪ್ರದೇಶ ಹೆಚ್ಚಾಗಿದ್ದರೂ ಅಲ್ಲಿ ಯೋಗ್ಯ-ಗಿಡ ಮರಗಳಿಲ್ಲ. ಜನ ಸಾಂದ್ರತೆಗೆ ಹೋಲಿಸಿದರೆ ಅರಣ್ಯದಲ್ಲಿನ ಗಿಡ-ಮರಗಳ ಪ್ರಮಾಣ ಕಡಿಮೆಯಿದೆ. ಇದರೊಂದಿಗೆ ಜಿಲ್ಲೆಯ ಅಭಿವೃದ್ಧಿ, ಜಲ ವಿದ್ಯುತ್ ಯೋಜನೆ, ಅರಣ್ಯದಲ್ಲಿನ ಅಗ್ನಿ ಅವಘಡ, ಸಾರಿಗೆ ವ್ಯವಸ್ಥೆ ಸೇರಿ ವಿವಿಧ ಕಾರಣಗಳಿಂದ ಅರಣ್ಯ ಭೂಮಿ ಕಡಿಮೆಯಾಗುತ್ತಿದೆ. ಹೀಗಾಗಿ ಕನಿಷ್ಟ 10 ವರ್ಷವಾದರೂ ಬದುಕಬಹುದಾದ ಗಿಡಗಳನ್ನು ಆರಿಸಿ ನಾಟಿ ಮಾಡಲು ಅರಣ್ಯ ಭೂಮಿ ಹೋರಾಟಗಾರರ ವೇದಿಕೆ ನಿರ್ಧರಿಸಿದೆ.
ಅರಣ್ಯ ಅಭಿವೃದ್ಧಿ ಮತ್ತು ಪರಿಸರ ಜಾಗೃತೆ ಕುರಿತು ಅರಣ್ಯ ಭೂಮಿ ಹೋರಾಟಗಾರರ ವೇದಿಕೆ ಮೊದಲಿನಿಂದಲೂ ಅರಣ್ಯವಾಸಿಗಳಲ್ಲಿ ಜಾಗೃತಿ ಮೂಡಿಸುತ್ತಿದೆ. ಈ ವೇದಿಕೆ ಈ ವರ್ಷ 33ನೇ ಹುಟ್ಟುಹಬ್ಬದ ಸಡಗರದಲ್ಲಿದ್ದು, ಅದರ ಅಂಗವಾಗಿ 10 ಲಕ್ಷ ಗಿಡ ನೆಡಲು ಉದ್ದೇಶಿಸಿದೆ. ಈ ಅಭಿಯಾನಕ್ಕಾಗಿ ವಿಶೇಷ ಲಾಂಚನವನ್ನು ಸಿದ್ಧಪಡಿಸಲಾಗಿದ್ದು, ಶುಕ್ರವಾರ ಶಿರಸಿಯಲ್ಲಿ ನ್ಯಾಯವಾದಿ ರವೀಂದ್ರ ನಾಯ್ಕ ಅದನ್ನು ಬಿಡುಗಡೆ ಮಾಡಿದರು.
ಯಲ್ಲಾಪುರದ ಭಿಮ್ಸಿ ವಾಲ್ಮೀಕಿ, ಮುಂಡಗೋಡದ ಶಿವಾನಂದ ಜೋಗಿ, ಪ್ರಮುಖರಾದ ಇಬ್ರಾಹಿಂ ಗೌಡಳ್ಳಿ, ನೆಹರು ನಾಯ್ಕ ಬಿಳೂರು, ಸುಬ್ಬಣ್ಣ ಮಾಗೋಡ, ಎಮ್ ಆರ್ ನಾಯ್ಕ ಕಂಡ್ರಾಜಿ, ನಾಗರಾಜ ಅಚನಳ್ಳಿ, ಸ್ವಾತಿ ಜೈನ್, ಕಲ್ಪನಾ ಪಾವಸ್ಕರ, ಯಶೋದಾ ನರೇಬೈಲ್, ಮಂಜಪ್ಪ ನಾಯ್ಕ ಬಂಕನಾಳ, ಎಮ್.ಕೆ ನಾಯ್ಕ ಬಂಕನಾಳ, ರೇಣುಕಾ ಎಮ್ ಸಿದ್ದಿ ಈ ವೇಳೆ ಹಾಜರಿದ್ದು ಗಿಡ ನೆಡುವ ಸಂಕಲ್ಪ ಮಾಡಿದರು. ವಿವಿಧ ತಾಲೂಕಿನ 163 ಗ್ರಾ ಪಂ ವ್ಯಾಪ್ತಿಯಲ್ಲಿ ಜುಲೈ 5ರವರೆಗೂ ಗಿಡ ನೆಡುವ ಆಂದೋಲನ ನಡೆಸಲು ನಿರ್ಧರಿಸಲಾಯಿತು.







