ಫೇಸ್ಪುಕ್ ಖಾತೆ ಮೂಲಕ ಜನಪ್ರತಿನಿಧಿಗಳ ವಿರುದ್ಧ ನಿಂದನಾರ್ಹ ಫೋಟೋ ಹಾಗೂ ವಿಡಿಯೋ ಎಡಿಟ್ ಮಾಡಿ ಪ್ರಸಾರ ಮಾಡುತ್ತಿದ್ದ ಫೇಸ್ಬುಕ್ ಪೇಜ್ ಪ್ರಮುಖರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮುರುಡೇಶ್ವರ ಬೈಲೂರಿನ ದೊಡ್ಡಬೆಳೆಸೆಯ ನಾಗರಾಜ ನಾಯ್ಕ ಹಾಗೂ ಸಣ್ಣಬಳಸೆಯ ಭಾಸ್ಕರ ದೇವಾಡಿಗ ಎಂಬಾತರು ತಮ್ಮ ಸಹಚರ ಹೊನ್ನಾವರದ ತೇಜು ನಾಯ್ಕ ಹಾಗೂ ಇನ್ನಿತರರ ಜೊತೆ ಸೇರಿ `ಭಟ್ಕಳಕ್ಕೆ ಬದಲಾವಣೆ’ ಎಂಬ ಫೇಸ್ಬುಕ್ ಖಾತೆ ರಚಿಸಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಬಳಸಿಕೊಂಡು ವಿವಿಧ ವಿಚಾರಗಳ ಬಗ್ಗೆ ಅವರು ಫೇಸ್ಬುಕ್ ಖಾತೆಯಲ್ಲಿ ಬರೆದುಕೊಳ್ಳುತ್ತಿದ್ದರು.
ರಾಜಕಾರಣಿಯೊಬ್ಬರನ್ನು ಹೋಲುವ ಚಿತ್ರ ಬಿಡಿಸಿ ಮಲ್ಟಿ ಆಸ್ಪತ್ರೆ ವಿಷಯವನ್ನು ವ್ಯಂಗ್ಯದ ಮೂಲಕ ಈ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊoಡಿದ್ದರು. ಜೂನ್ 5ರಂದು ಯಾರ ಹೆಸರನ್ನು ಬಳಸದೇ ಹುಟ್ಟುಹಬ್ಬದ ಶುಭಾಶಯ ಕೋರಿ ಆ ಫೇಸ್ಬುಕ್ ಪುಟದಲ್ಲಿ ವಿಶಿಷ್ಟ ರೀತಿಯ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಅದರಲ್ಲಿ `ಮಂಕಣ್ಣ ಅಲ್ಲಲ್ಲ.. ನುಂಗಣ್ಣ’ ಎಂದು ಬರೆದಿದ್ದರು. ಜೊತೆಗೆ ವ್ಯಕ್ತಿಯೊಬ್ಬರನ್ನು ಖಳನಾಯಕನ ರೀತಿ ಬಿಂಬಿಸಿದ್ದರು.
1.29 ನಿಮಿಷದ ಆ ವಿಡಿಯೋ ನೋಡಿದ ಭಟ್ಕಳ ತೆರ್ನಮಕ್ಕಿಯ ನಾಗಪ್ಪ ನಾಯ್ಕ ಅವರು ಫೇಸ್ಬುಕ್ ಖಾತೆದಾರರ ಹೆಸರು ಉಲ್ಲೇಖಿಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. `ಭಟ್ಕಳಕ್ಕೆ ಬದಲಾವಣೆ ಎಂಬ ಫೇಸ್ಬುಕ್ ಖಾತೆಯಲ್ಲಿ ಉತ್ತರ ಕನ್ನಡ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರನ್ನು ಗುರಿಯಾಗಿರಿಸಿಕೊಂಡು ಜನರಿಗೆ ತಪ್ಪು ಸಂದೇಶ ನೀಡುವ ವಿಡಿಯೋ ಹರಿಬಿಡಲಾಗಿದೆ. ಇದರಿಂದ ಉಸ್ತುವಾರಿ ಸಚಿವರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಮುಜುಗರವಾಗಿದ್ದು, ಒಂದು ಪಕ್ಷದ ಕಾರ್ಯಕರ್ತರ ನೆಮ್ಮದಿಗೆ ಧಕ್ಕೆ ತರುವ ವಿಡಿಯೋಬಂದಿದೆ’ ಎಂದು ದೂರಿದ್ದರು. ಅವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು.
ಈ ಹಿನ್ನಲೆ ಮುರುಡೇಶ್ವರ ಪೊಲೀಸರು ಕಾರ್ಯಾಚರಣೆ ನಡೆಸಿ ಆ ಫೇಸ್ಬುಕ್ ಪುಟದ ಅಡ್ಮಿನ್ ಆದ ನಾಗರಾಜ ನಾಯ್ಕ ಹಾಗೂ ಭಾಸ್ಕರ ದೇವಾಡಿಗ ಅವರನ್ನು ಬಂಧಿಸಿದ್ದಾರೆ. ಅವರ ಬಂಧನದ ನಂತರವೂ ಫೇಸ್ಬುಕ್ ಪುಟದಲ್ಲಿ ಬರಹವೊಂದು ಪ್ರಕಟವಾಗಿದೆ. ಕೆಲ ಸಮಯದ ಹಿಂದೆ ಅದೇ ಫೇಸ್ಬುಕ್ ಪುಟದಲ್ಲಿ `ನೀವು ಎಷ್ಟೇ ಕೇಸ್ ಹಾಕಿದರೂ ಹಾಕಿ. ನೀವು ಎಷ್ಟೇ ತೊಂದರೆ ಕೊಟ್ಟರೂ ನಾವು ಮಾಸ್ತಪ್ಪ ನಾಯ್ಕ ಬೆಲಸೆರವರನ್ನು ಬಿಡೋ ಮಾತೇ ಇಲ್ಲ’ ಎಂದು ಇನ್ನೊಂದು ವಿಡಿಯೋ ಟ್ಯಾಗ್ ಆಗಿದೆ. ತೇಜು ನಾಯ್ಕ ಹೊನ್ನಾವರ ಎಂಬಾತರು ಈ ವಿಡಿಯೋ ಟ್ಯಾಗ್ ಮಾಡಿದ್ದಾರೆ.







