ಶಿರಸಿಯ ಶ್ರೀಪಾದ ಹೆಗಡೆ ಅವರ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೊನೆಗೌಡ ವಿನಾಯಕ ಗೌಡ ಮರದಿಂದ ಬಿದ್ದು ಎರಡು ವಾರ ಆಸ್ಪತ್ರೆಯಲ್ಲಿ ನರಳಾಡಿ ಸಾವನಪ್ಪಿದ್ದಾರೆ.
ಶಿರಸಿ ಅಜ್ಜಿಬಾಳ ಬಳಿಯ ಬಾಳೆಗದ್ದೆಯ ವಿನಾಯಕ ಗೌಡ (48) ಅವರು ಪತ್ನಿ ರೂಪಾ ಗೌಡ ಅವರ ಜೊತೆ ಬದುಕು ಕಟ್ಟಿಕೊಂಡಿದ್ದರು. ಅವರು ಮೇ 28ರಂದು ಪಕ್ಕದ ಊರಾದ ಬಾಳೆಗಾರದ ಶ್ರೀಪಾದ ಹೆಗಡೆ ಅವರ ತೋಟದ ಕೆಲಸಕ್ಕೆ ಹೋಗಿದ್ದರು. ಮರ ಮರ ಹತ್ತಿ ಕೆಲಸ ಮಾಡುವಾಗ ಮರದಿಂದ ನೆಲಕ್ಕೆ ಬಿದ್ದರು.
ಮರದಿಂದ ಬೀಳುವಾಗ ವಿನಾಯಕ ಗೌಡ ಅವರು ದೊಡ್ಡದಾಗಿ ಕೂಗಿದರು. ಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಈಶ್ವರ ನಾಯ್ಕ ಆ ಕೂಗು ಕೇಳಿ ಅಲ್ಲಿಗೆ ಧಾವಿಸಿದರು. ರಸ್ತೆ ಮೇಲೆ ನಡೆದು ಹೋಗುತ್ತಿದ್ದ ಹನ್ನಂದುಗುಡ್ಡೆಯ ರಾಘವೇಂದ್ರ ಗೌಡ ಸಹ ಅಲ್ಲಿಗೆ ಬಂದು ವಿನಾಯಕ ಗೌಡ ಅವರ ಉಪಚಾರ ಮಾಡಿದರು.
ವಿನಾಯಕ ಗೌಡ ಅವರು ಮರದಿಂದ ಬಿದ್ದ ವಿಷಯ ಕೇಳಿದ ಪಕ್ಕದಮನೆ ರಾಮಕೃಷ್ಣ ಹೆಗಡೆ ಅವರು 108ಗೆ ಫೋನ್ ಮಾಡಿದರು. ಆಂಬುಲೆನ್ಸ್ ಮೂಲಕ ವಿನಾಯಕ ಗೌಡ ಅವರನ್ನು ಶಿರಸಿ ಆಸ್ಪತ್ರೆಗೆ ತರಲಾಯಿತು. ಆಸ್ಪತ್ರೆಯವರು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್’ಗೆ ಕಳುಹಿಸಿದರು. ಅಲ್ಲಿನ ವೈದ್ಯರು ವಿನಾಯಕ ಗೌಡ ಅವರ ಬೆನ್ನು ಹುರಿ ಮುರಿದ ಬಗ್ಗೆ ವಿವರಿಸಿದರು. ಮೇ 30ರಂದು ವಿನಾಯಕ ಗೌಡ ಅವರಿಗೆ ಶಸ್ತಚಿಕಿತ್ಸೆಯನ್ನು ಮಾಡಿದರು.
ಆದರೆ, ಅದಾದ ನಂತರ ವಿನಾಯಕ ಗೌಡ ಅವರ ಆರೋಗ್ಯದಲ್ಲಿ ಏರುಪೇರಾಯಿತು. ಅವರು ಮತ್ತೆ ಚೇತರಿಸಿಕೊಳ್ಳಲಿಲ್ಲ. ಜೂ 11ರಂದು ಅವರು ನೋವು ಸಹಿಸಲಾಗದೇ ಸಾವನಪ್ಪಿದರು. ವಿನಾಯಕ ಗೌಡ ಅವರ ಪತ್ನಿ ರೂಪಾ ಗೌಡ (34) ಅವರು ಈ ಎಲ್ಲಾ ವಿಷಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.
ಗಮನಿಸಿ: ಅಡಿಕೆಗೆ ಮದ್ದು ಹೊಡೆಸುವಾಗ ದೋಟಿ ಬಳಸಿ: ಕಾರ್ಮಿಕರ ಜೀವ ಉಳಿಸಿ







