ಗೋಕರ್ಣದ ರಾಮ ಮಂದಿರ ಬಳಿಯ ಹಿಂದಿನ ಗುಡ್ಡ ಕಳೆದ ವರ್ಷ ಕುಸಿದಿದ್ದು, ಈ ವರ್ಷ ಇನ್ನಷ್ಟು ಕುಸಿಯುವ ಆತಂಕ ಎದುರಾಗಿದೆ. ಹೀಗಾಗಿ ರಾಮತೀರ್ಥಕ್ಕೆ ತೆರಳುವ ಮಾರ್ಗದ ಪ್ರವೇಶ ನಿಷೇಧಿಸಲಾಗಿದೆ.
ಕಳೆದ ವರ್ಷ ಮಳೆಗಾಲದಲ್ಲಿ ಮುಖ್ಯ ಕಡಲತೀರದ ಬಳಿಯ ಶ್ರೀರಾಮ ಮಂದಿರ ಪಕ್ಕದ ಪರ್ವತ ಕುಸಿತವಾಗಿತ್ತು. ಶಿರೂರು ಬಳಿ ಗುಡ್ಡ ಕುಸಿತದ ಸಮಯದಲ್ಲಿಯೇ ಇಲ್ಲಿಯೂ ಬಂಡೆ ಉರುಳಿಬಂದಿತ್ತು. ಆದರೆ, ದೇವಾಲಯಕ್ಕೆ ಯಾವುದೇ ಹಾನಿ ಆಗಿರಲಿಲ್ಲ. ಆ ವೇಳೆ ರಾಮತೀರ್ಥ ಹಾಗೂ ಪಕ್ಕದ ಕಟ್ಟಡಕ್ಕೆ ಬಿರುಕು ಮೂಡಿತ್ತು. ಈ ವೇಳೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಆದರೆ, ಯಾವುದೇ ಕ್ರಮ ಜರುಗಿಸಿರಲಿಲ್ಲ.
ಮಳೆಗಾಲ ಮುಗಿದ ನಂತರ ಶಾಂಡಿಲ್ಯಯ ಮಹಾರಾಜರ ಶಿಷ್ಯರು ಇಲ್ಲಿ ಆಗಮಿಸಿ ಮೇಲ್ಚಾವಣಿಗೆ ಅಪ್ಪಳಿಸಿದ್ದ ಮಣ್ಣಿನ ರಾಶಿ ಹಾಗೂ ಕಲ್ಲು ಬಂಡೆಗಳನ್ನು ಸ್ವಚ್ಛ ಮಾಡಿದ್ದರು. ಝರಿ ನೀರು ಮುಚ್ಚಿರುವುದನ್ನು ಬಿಡಿಸಿ ಸರಿಪಡಿಸಿದ್ದರು. ಆದರೆ, ಆ ಬಂಡೆ ತೆಗೆಯಲು ಅವರಿಂದ ಆಗಿರಲಿಲ್ಲ. ಹೀಗಾಗಿ ಆ ಬಂಡೆ ಇದೀಗ ಕುಸಿಯುವ ಆತಂಕದಲ್ಲಿದೆ.







