ಅಪರಾಧ ಪ್ರಕರಣಗಳಲ್ಲಿ ದಾಖಲಾದವರ ಹೆಸರು ಹಾಗೂ ಮುಖಚಹರೆಯನ್ನು ಗ್ರಹಿಸುವ ಈ ಕ್ಯಾಮರಾ ಕಳ್ಳರನ್ನು ಕಂಡ ತಕ್ಷಣ ಸೈರನ್ ಮೊಳಗಿಸುತ್ತದೆ. ನಕಲಿ ನೋಂದಣಿ ಸಂಖ್ಯೆಯೊoದಿಗೆ ಸಂಚರಿಸುವ ವಾಹನಗಳನ್ನು ಪತ್ತೆ ಮಾಡಿ ಪೊಲೀಸರಿಗೆ ಮಾಹಿತಿ ನೀಡುತ್ತದೆ.
ಇಂಥಹ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಕ್ಯಾಮರಾವನ್ನು ಉತ್ತರ ಕನ್ನಡ ಜಿಲ್ಲೆಯ ಗಡಿಪ್ರದೇಶಗಳಲ್ಲಿ ಒಂದಾದ ಯಲ್ಲಾಪುರದ ಕಿರವತ್ತಿಯಲ್ಲಿ ಅಳವಡಿಸಲಾಗಿದೆ. ಬೇರೆ ಬೇರೆ ರಾಜ್ಯ-ಜಿಲ್ಲೆಗಳಲ್ಲಿನ ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸುವವರನ್ನು ತಡೆಯುವುದಕ್ಕಾಗಿ ಈ ಕ್ಯಾಮರಾ ಪೊಲೀಸರಿಗೆ ನೆರವು ನೀಡುತ್ತಿದೆ. ಇದೇ ತಂತ್ರಜ್ಞಾನದ ಆಧಾರದಲ್ಲಿ ಪೊಲೀಸರು ಈಗಾಗಲೇ ಅನೇಕರ ಹೆಡೆಮುರಿಕಟ್ಟಿದ್ದು, ಜಿಲ್ಲೆಗೆ ಬರುವ ಅಪರಾಧಿಗಳಿಗೆ ಸಹ ವಿಶಿಷ್ಟ ಕ್ಯಾಮರಾ ಅಳವಡಿಸುವ ಮೂಲಕ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಪ್ರತಿ ದಿನ ನಡೆಯುವ ಅಪರಾಧ-ದೂರು ದುಮ್ಮಾನಗಳ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ. ಆ ಪ್ರಕರಣದಲ್ಲಿನ ಆರೋಪಿಗಳ ವಿವರ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಿಗುತ್ತದೆ. ಅಲ್ಲಿನ ದಾಖಲಾತಿಗಳನ್ನು ಗಡಿಭಾಗದ ಈ ಕ್ಯಾಮರಾಗೆ ಅಳವಡಿಸಲಾಗಿದ್ದು, ಅದೇ ಆಧಾರದಲ್ಲಿ ಅಪರಾಧ ಕೃತ್ಯದಲ್ಲಿ ಭಾಗಿಯಾದವರನ್ನು ಈ ಕ್ಯಾಮರಾ ಗುರುತಿಸುತ್ತಿದೆ. ಅಪರಾಧ ಕೃತ್ಯದಲ್ಲಿ ಭಾಗಿಯಾದವರ ಹುಡುಕಾಟ, ಭವಿಷ್ಯದಲ್ಲಿ ಆಗಬಹುದಾದ ಅವಘಡಗಳನ್ನು ತಡೆಯಲು ಈ ಬಗೆಯ ಕ್ಯಾಮರಾ ಪೊಲೀಸರಿಗೆ ನೆರವಾಗುತ್ತಿದೆ.
ದುಷ್ಕರ್ಮಿಗಳು ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಅಪರಾಧ ನಡೆಸಿ ತಪ್ಪಿಸಿಕೊಳ್ಳಲು ಉತ್ತರ ಕನ್ನಡ ಜಿಲ್ಲೆಗೆ ಬರುವ ಸಾಧ್ಯತೆ ಹೆಚ್ಚು. ಹೀಗಾಗಿ ಗಡಿಭಾಗದ ಕಿರವತ್ತಿಯಲ್ಲಿ ಅತ್ಯಾಧುನಿಕ ಕ್ಯಾಮರಾ ಅಳವಡಿಸಲಾಗಿದ್ದು, ಎಲ್ಲಿಯೇ ಅಪರಾಧ ನಡೆಸಿ ತಪ್ಪಿಸಿಕೊಳ್ಳಲು ಬೇರೆ ಊರಿಗೆ ಪರಾರಿಯಾದರೂ ಇಂಥ ಕ್ಯಾಮರಾದಿಂದ ಅವರನ್ನು ಬಂಧಿಸಲು ಸಾಧ್ಯ ಎಂಬುದು ಪೊಲೀಸರ ನಂಬಿಕೆ.
ಜಿಲ್ಲೆಯ ಗಡಿಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಗಸ್ತು ವಾಹನ ನೀಡಿದ್ದಾರೆ. `ಕಿರವತ್ತಿ ಹಾಗೂ ಸುತ್ತಲಿನ ಪ್ರದೇಶಕ್ಕೆ ಪೊಲೀಸ್ ಉಪನಿರೀಕ್ಷಕರು ನಿತ್ಯ ಸಂಚಾರ ನಡೆಸಬೇಕು’ ಎಂದು ಅವರು ಫಾರ್ಮಾನು ಹೊರಡಿಸಿದ್ದಾರೆ.







