ಈಚೆಗೆ ಕಿರವತ್ತಿಯಲ್ಲಿ ಅಳವಡಿಸಿದ್ದ ಹೊಸ ಕ್ಯಾಮರಾ ಅಪರಾಧ ಪ್ರಕರಣವೊಂದನ್ನು ಬೇಧಿಸಿದೆ. ಕ್ಯಾಮರಾ ನೀಡಿದ ಮಾಹಿತಿ ಅನ್ವಯ ಪೊಲೀಸರು ಅಪಘಾತವೊಂದರಲ್ಲಿ ಇಬ್ಬರನ್ನು ಕೊಂದು ಪರಾರಿಯಾಗಿದ್ದ ಲಾರಿ ಚಾಲಕನನ್ನು ಬಂಧಿಸಿದ್ದಾರೆ.
ಜೂನ್ 8ರಂದು ಯಲ್ಲಾಪುರದ ಚಿಕ್ಕಮಾವಳ್ಳಿ ಬಳಿಯ ಇಂಡಿಯಾ ಗೇಟ್ ಹೊಟೇಲ್ ಎದುರು ಅಪರಿಚಿತ ವಾಹನ ಬೈಕಿಗೆ ಬಡಿದಿತ್ತು. ಅಪಘಾತ ನಡೆದ ನಂತರ ಅಪರಿಚಿತ ವಾಹನ ಚಾಲಕ ತನ್ನ ವಾಹನ ನಿಲ್ಲಿಸಿರಲಿಲ್ಲ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿರಲಿಲ್ಲ. ಹೀಗಾಗಿ ಬೈಕಿನಲ್ಲಿದ್ದ ಕಲಘಟಗಿಯ ರಾಮು ಗುಜಲೂರು ಹಾಗೂ ವಿಷ್ಣು ಗುಜಲೂರು ಎಂಬಾತರು ಸಾವನಪ್ಪಿದ್ದರು.
ಅದರ ಮರುದಿನವೇ ಕಿರವತ್ತಿಯಲ್ಲಿ ಸಿಸಿ ಕ್ಯಾಮರಾ ಉದ್ಘಾಟನೆ ನಡೆದಿದ್ದು, ಅಪಘಾತದ ಹಿಂದಿನ ದಿನ ಸಿಸಿ ಕ್ಯಾಮರಾ ಅಳವಡಿಕೆಯ ಕಾರ್ಯ ನಡೆದಿತ್ತು. ಆ ವೇಳೆ ಅಪಘಾತಕ್ಕೆ ಕಾರಣವಾದ ಅಪರಿಚಿತ ವಾಹನ ಹುಬ್ಬಳ್ಳಿ ಕಡೆ ಹೋಗಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಜೊತೆಗೆ ಅಪಘಾತ ಸ್ಥಳದಲ್ಲಿ ಸಿಕ್ಕ ಟೈಯರ್ ಅಚ್ಚು ನೋಡಿದ ಪೊಲೀಸರು ಅಪರಿಚಿತ ವಾಹನ ಲಾರಿ ಎಂದು ಪತ್ತೆ ಮಾಡಿದ್ದರು. ಹಳದಿ ಬಣ್ಣದ ಪೇಂಟ್ ಬಿದ್ದಿರುವುದನ್ನು ಗಮನಿಸಿ ಲಾರಿಯ ಬಣ್ಣವನ್ನು ಖಚಿತಪಡಿಸಿಕೊಂಡಿದ್ದರು. ಈ ನಡುವೆ ಪ್ರತ್ಯಕ್ಷದರ್ಶಿಯೊಬ್ಬರು ಟ್ಯಾಂಕರ್ ಗುದ್ದಿ ಆ ಇಬ್ಬರು ಸಾವನಪ್ಪಿರುವ ಬಗ್ಗೆ ಹೇಳಿದ್ದರು.
ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಸ್ಥಳ ಭೇಟಿ ನಡೆಸಿ ಕುರುಹುಗಳನ್ನು ಸಂಗ್ರಹಿಸಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ಎಂ ಜೊತೆಗೆ ಪೊಲೀಸ್ ಉಪಅಧೀಕ್ಷಕಿ ಗೀತಾ ಪಾಟೀಲ್ ವಿವಿಧ ಆಯಾಮಗಳಲ್ಲಿ ಯೋಚಿಸಿದ್ದರು. ಪೊಲೀಸರಿಗೆ ಸಿಕ್ಕ ಸುಳಿವು ಹಾಗೂ ಸಿಸಿ ಕ್ಯಾಮರಾದಲ್ಲಿನ ದಾಖಲೆಗಳು ಹೊಂದಾಣಿಕೆಯಾಗುತ್ತಿದ್ದವು. ಹೀಗಾಗಿ ಯಲ್ಲಾಪುರ ಪಿಐ ರಮೇಶ ಹಾನಾಪುರ, ಪಿಎಸ್ಐ ಯಲ್ಲಾಲಿಂಗ ಕನ್ನೂರು, ಸಿದ್ದಪ್ಪ ಗುಡಿ ಆ ಟ್ಯಾಂಕರ್ ಬೆನ್ನತ್ತಿ ಹೊರಟರು.
ಪೊಲೀಸ್ ಸಿಬ್ಬಂದಿ ಮಹಮದ್ ಶಫೀ, ಧರ್ಮಾ ನಾಯ್ಕ, ಗಿರೀಶ ಲಮಾಣಿ, ಶೋಭಾ ನಾಯ್ಕ ಹಾಗೂ ಶಿಲ್ಪಾ ಗೌಡ ಸೇರಿ ಹುಬ್ಬಳ್ಳಿಯಲ್ಲಿ ಅಡಗಿದ್ದ ಶೀತಲಪ್ರಸಾದ ಬಿಂದ ಎಂಬಾತನನ್ನು ಬಂಧಿಸಿದರು. ಉತ್ತರ ಪ್ರದೇಶದ ಲಾರಿ ಚಾಲಕನಾಗಿದ್ದ ಶೀತಲಪ್ರಸಾದ್ ಆ ದಿನ ಅಪಘಾತ ಮಾಡಿದನ್ನು ಒಪ್ಪಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು.