ಯಲ್ಲಾಪುರ-ಹುಬ್ಬಳ್ಳಿ ಹೆದ್ದಾರಿಯಲ್ಲಿ ಮರ ಬಿದ್ದ ಪರಿಣಾಮ ಎರಡು ಆಂಬುಲೆನ್ಸ್ ಮುಂದೆ ಚಲಿಸಲಾಗದೇ ರೋಗಿಗಳು ತೊಂದರೆ ಅನುಭವಿಸಿದ್ದಾರೆ. ಮರ ಬಿದ್ದು ತಾಸು ಕಳೆದರೂ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಾರದ ಕಾರಣ ಸ್ಥಳೀಯರೇ ಮರ ತೆರವು ಮಾಡಿ ಆಂಬುಲೆನ್ಸಿಗೆ ರಸ್ತೆ ಬಿಟ್ಟು ಕೊಟ್ಟಿದ್ದಾರೆ.
ಶುಕ್ರವಾರ ಹಳಿಯಾಳ ಕ್ರಾಸ್ನ ಬಳಿ ದೊಡ್ಡ ಮರ ಬಿದ್ದಿತು. ಹೆದ್ದಾರಿಗೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ಎರಡು ಕಡೆ ವಾಹನಗಳು ನಿಂತಿದ್ದವು. ಸುಮಾರು 5ಕಿಮೀವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಈ ವೇಳೆ ಎರಡು ಆಂಬುಲೆನ್ಸ ಸಹ ಅಲ್ಲಿಗೆ ಬಂದಿದ್ದು, ಅವು ಮುಂದೆ ಸಾಗಲಾರದೇ ಅಲ್ಲಿಯೇ ಸಿಲುಕಿಕೊಂಡವು.
ತಾಸು ಕಳೆದರೂ ಮರ ತೆರವು ಮಾಡಲು ಅರಣ್ಯ ಸಿಬ್ಬಂದಿ ಬರಲಿಲ್ಲ. ಹೀಗಾಗಿ ಅಲ್ಲಿನ ಹೊಟೇಲ್ ವ್ಯಾಪಾರಿ ಮಂಜುನಾಥ ಶಿಂಧೆಕರ್ ಕಾರ್ಯಾಚರಣೆಗಿಳಿದರು. ಸ್ಥಳೀಯರು ಹಾಗೂ ವಿವಿಧ ವಾಹನ ಸವಾರರು ಕಾರ್ಯಾಚರಣೆಗೆ ಕೈ ಜೋಡಿಸಿದರು. ಇದಾದ ನಂತರ ಅರಣ್ಯ ಇಲಾಖೆಯ ಜೀಪ್ ಆಗಮಿಸಿದ್ದು, ಅಧಿಕಾರಿಗಳು ಜೀಪಿನಿಂದ ಕೆಳಗೆ ಇಳಿಯದ ಕಾರಣ ಅಲ್ಲಿದ್ದವರು ಆಕ್ರೋಶವ್ಯಕ್ತಪಡಿಸಿದರು.







