ಯಲ್ಲಾಪುರದ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘದ ಶಾಖೆಯಲ್ಲಿ ಜೀವನ ಮೌಲ್ಯದ ನಿಧಿ ಯೋಜನೆಯಡಿ ಸದಸ್ಯರ ಕುಟುಂಬಕ್ಕೆ ವಿಮಾ ಪರಿಹಾರದ ಚೆಕ್ ವಿತರಿಸಲಾಯಿತು.
ಮೃತಪಟ್ಟ ಸದಸ್ಯರಾದ ದುರ್ಗವ್ವಾ ವಿಶ್ವಾಸ ಬೋವಿ ಕುಟುಂಬಕ್ಕೆ 50 ಸಾವಿರ ರೂ ಹಾಗೂ ಜೇವಾನಿ ಮ್ಯಾಕ್ಸಿ ಸಿದ್ದಿ ಅವರ ಕುಟುಂಬಕ್ಕೆ 45 ಸಾವಿರ ರೂ ಪರಿಹಾರದ ಮೊತ್ತ ವಿತರಿಸಲಾಯಿತು.
ಯಲ್ಲಾಪುರ ಶಾಖೆಯ ಅಧ್ಯಕ್ಷ ಜಿ.ಎಸ್.ಭಟ್ಟ ಕಾರೆಮನೆ ಚೆಕ್ ವಿತರಿಸಿ ಮಾತನಾಡಿ, ಸಂಸ್ಥೆ ಕೇವಲ ಸಾಲ ವಿತರಣೆ ಅಥವಾ ಹಣಕಾಸಿನ ವ್ಯವಹಾರಕ್ಕೆ ಸೀಮಿತವಾಗಿಲ್ಲ. ಸದಸ್ಯರು, ಸಾಲಗಾರರ ಹಿತವನ್ನೂ ದೃಷ್ಟಿಯಲ್ಲಿರಿಸಿಕೊಂಡು ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ ಎಂದರು.
ಹಿರಿಯ ಪತ್ರಕರ್ತ ಸುಬ್ರಾಯ ಬಿದ್ರೆಮನೆ ಮಾತನಾಡಿ, ಸೇಫ್ ಎಂಬುದು ಸಂಘದ ಹೆಸರಿನಲ್ಲೇ ಇದೆ. ಗ್ರಾಹಕರು ಸಂಘದಲ್ಲಿ ವ್ಯವಹಾರ ಮಾಡಿದರೆ ಎಲ್ಲ ರೀತಿಯಲ್ಲೂ ಸುರಕ್ಷಿತರಾಗಿರುತ್ತಾರೆ ಎಂದರು.
ಪತ್ರಕರ್ತ ಶ್ರೀಧರ ಅಣಲಗಾರ ಮಾತನಾಡಿ, ಜೀವನ ಮೌಲ್ಯ ನಿಧಿ ಯೋಜನೆಯ ಸದಸ್ಯರಿಗೆ ಉಪಯುಕ್ತವಾಗಿದೆ. ಸೇಫ್ ಸ್ಟಾರ್ ಸಹಕಾರಿ ಆರಂಭಿಸಿರುವ ಈ ಯೋಜನೆ ಇತರ ಸಹಕಾರಿ ಸಂಘಗಳಿಗೂ ಮಾದರಿಯಾಗಿದೆ ಎಂದರು.
ಸಂಘದ ಹಿರಿಯ ವ್ಯವಸ್ಥಾಪಕ ಸುಬ್ರಾಯ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ವ್ಯವಸ್ಥಾಪಕ ಮಂಜುನಾಥ ಹಿರೇಮಠ ನಿರ್ವಹಿಸಿದರು.





