ಯಲ್ಲಾಪುರದ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಾತ್ರೆ ಲೆಕ್ಕಾಚಾರದ ವಿಷಯವೇ ಪ್ರಸ್ತಾಪವಾಗದೇ ದಾಖಲೆ ಸೃಷ್ಟಿಯಾಯಿತು. ಕಳೆದ 9 ಸಭೆಗಳಲ್ಲಿ ಹೆಚ್ಚಿನ ಸಮಯ ನುಂಗಿದ್ದ ಜಾತ್ರೆ ಲೆಕ್ಕಾಚಾರದ ವಿಷಯ ಈ ಬಾರಿ ಪ್ರಸ್ತಾವಾಗಲಿಲ್ಲ.
ಉದ್ಯಮನಗರ ವಾರ್ಡ್ ಸದಸ್ಯ ನಾಗರಾಜ ಅಂಕೋಲೆಕರ್ ಮಾತನಾಡಿ, ನನ್ನ ವಾರ್ಡಿನಲ್ಲಿ ನಾಪತ್ತೆಯಾಗಿದ್ದ ಪಂಪ್ ಸೆಟ್ ಈಗ ಸಿಕ್ಕಿದೆ. ಪಂಪ್ ನಾಪತ್ತೆಯಾದ ಬಗ್ಗೆ ಹಿಂದಿನ ಸಭೆಯಲ್ಲಿ ಪ್ರಸ್ತಾಪಿಸಿದ್ದೆ, ಆ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿದ್ದಂತೆ, ಇದ್ದಕ್ಕಿದ್ದಂತೆ ಪಂಪ್ ಪ್ರತ್ಯಕ್ಷವಾಗಿದೆ ಎಂದರು.
ಪಟ್ಟಣ ಪಂಚಾಯಿತಿಯ ಆಂತರಿಕ ವಿಚಾರಗಳು ಸೋರಿಕೆಯಾಗುತ್ತಿವೆ. ಸಭೆ ನಡೆಯುತ್ತಿರುವಾಗಲೇ ಸಭೆಯಲ್ಲಿ ಚರ್ಚೆಯಾಗುತ್ತಿರುವ ವಿಚಾರಗಳನ್ನು ಹೊರಗಿನವರಿಗೆ ತಿಳಿಸಲಾಗುತ್ತಿದೆ. ಟೆಂಡರ್ ಪ್ರಕ್ರಿಯೆಯ ವಿಚಾರಗಳೂ ಹೀಗೆ ಆಗುತ್ತಿವೆ.ಇಂಜನಿಯರಿಂಗ್ ವಿಭಾಗದಿಂದ ಎಲ್ಲಾ ಮಾಹಿತಿಗಳು ಹೊರಹೋಗುತ್ತಿವೆ ಎಂದು ರಾಧಾಕೃಷ್ಣ ನಾಯ್ಕ ಹಾಗೂ ಸತೀಶ ನಾಯ್ಕ ಆರೋಪಿಸಿದರು. ಸ್ಥಾಯಿ ಸಮಿತಿ ಸಭೆಯಲ್ಲೂ ಈ ಅನುಭವ ಆಗಿದೆ ಎಂದು ಸಮಿತಿ ಅಧ್ಯಕ್ಷ ಮಹಮ್ಮದ್ ಅಲಿ ಧ್ವನಿಗೂಡಿಸಿದರು.
ಪ.ಪಂ ಕಚೇರಿಗೆ ತಮ್ಮ ಕಾರ್ಯಕ್ಕಾಗಿ ಬರುವ ಸಾರ್ವಜನಿಕರಿಗೆ ‘ಮುಖ್ಯಾಧಿಕಾರಿಗಳಿಲ್ಲ’ ಎಂಬ ಸಿದ್ಧ ಉತ್ತರ ಸಿಗುತ್ತದೆ. ಎಲ್ಲವನ್ನೂ ಮುಖ್ಯಾಧಿಕಾರಿಗಳೇ ಮಾಡಬೇಕಿಲ್ಲ. ಕೆಳ ಹಂತದ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿರುವುದೇಕೆ? ಎಂದು ರಾಧಾಕೃಷ್ಣ ಪ್ರಶ್ನಿಸಿದರು.
ಸದ್ಯ ಪ್ರಭಾರಿ ಮುಖ್ಯಾಧಿಕಾರಿ ಇದ್ದಾರೆ. ಅವರು ಮೂರು ದಿನ ಇಲ್ಲಿ, ಮೂರು ದಿನ ಮುಂಡಗೋಡಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಸದಸ್ಯ ಸತೀಶ ನಾಯ್ಕ ಸಮಜಾಯಿಷಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಕೈಸರ್ ಸೈಯ್ಯದ್ ಅಲಿ, ಸದಸ್ಯರ ಪ್ರಶ್ನೆಗೆ ಅಧ್ಯಕ್ಷರು ಉತ್ತರಿಸಲಿ, ಎಲ್ಲದಕ್ಕೂ ನೀವೇ ಏಕೆ ಉತ್ತರಿಸುತ್ತೀರಿ ಎಂದು ಪ್ರಶ್ನಿಸಿದರು. ಒಂದು ಸಭೆಯಲ್ಲಿ ಸತೀಶ ಅವರಿಗೆ ಅಧ್ಯಕ್ಷತೆಯ ಅವಕಾಶ ಕೊಡಿ ಎಂದು ಕಾಲೆಳೆದರು.
ಯಲ್ಲಾಪುರ ಗ್ರಾಮ ಸ.ನಂ 29 ರ ಲೇ ಔಟ್ ನಲ್ಲಿ ಧರೆ ಕುಸಿದು ರಾಜಾಕಾಲುವೆಗೆ ಬಿದ್ದು, ಸಮೀಪದ ಕೃಷಿ ಜಮೀನಿಗೆ ಹಾನಿಯಾಗಿದೆ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ ಸೂಚಿಸಿದ ವಿಷಯ ಪ್ರಸ್ತಾಪಿಸಿದಾಗ, ಇದಕ್ಕೆ ಸದಸ್ಯರಿಂದ ವಿರೋಧ ವ್ಯಕ್ತವಾಯಿತು. ಲೇ ಔಟ್ ಗೆ ಅನುಮತಿ ನೀಡುವಾಗ ಸಭೆಯಲ್ಲಿ ಪ್ರಸ್ತಾಪ ಮಾಡಿಲ್ಲ, ಈಗ ಅದತ ಪ್ರಸ್ತಾಪವೇಕೆ ಎಂದು ರಾಧಾಕೃಷ್ಣ ನಾಯ್ಕ, ಸತೀಶ ನಾಯ್ಕ ಪ್ರಶ್ನಿಸಿದರು. ಲೇ ಔಟ್ ಗೆ ಅನುಮತಿ ನೀಡುವಾಗ ಇದ್ದ ಮುಖ್ಯಾಧಿಕಾರಿ ಹಾಗೂ ಇಂಜನಿಯರ್ ವೇತನದಿಂದ ಹಾನಿ ಭರಿಸಬೇಕು. ಪಟ್ಟಣ ಪಂಚಾಯಿತಿಯಿಂದ ಹಾನಿ ಭರಿಸಬಾರದು ಎಂದು ಆಗ್ರಹಿಸಿದರು.
ಕಾಳಮ್ಮನಗರದಲ್ಲಿ ವಾಸಿಸುತ್ತಿರುವ ಪ.ಜಾತಿ, ಪ.ಪಂಗಡದ 30 ಕ್ಕೂ ಹೆಚ್ಚು ನಿವಾಸಿಗಳಿಗೆ ಮೂಲ ಸೌಕರ್ಯ ಒದಗಿಸುವ ಕುರಿತು ಸಮಾಜ ಕಲ್ಯಾಣ ಇಲಾಖೆಯಿಂದ ಬಂದ ಮನವಿ ಕುರಿತು ಚರ್ಚೆ ನಡೆಯಿತು. ಸರಿಯಾದ ದಾಖಲೆಗಳಿಲ್ಲದ ಕಾರಣ ನಿಯಮದಂತೆ ಎನ್.ಒ.ಸಿ ನೀಡಲು ಬರುವುದಿಲ್ಲ, ಸರ್ಕಾರದಿಂದ ಆದೇಶ ಬಂದರೆ ನೀಡಲಾಗುವುದೆಂದು ಮುಖ್ಯಾಧಿಕಾರಿ ತಿಳಿಸಿದರು. ಸದ್ಯಕ್ಕೆ ಆ ಪ್ರದೇಶದವರಿಗೆ ಸೋಲಾರ್ ದೀಪದ ವ್ಯವಸ್ಥೆಯನ್ನು ಮಾಡುವಂತೆ ಸೋಮು ನಾಯ್ಕ ಒತ್ತಾಯಿಸಿದರು.







