ಯಲ್ಲಾಪುರ ತಾಲೂಕಿನ ವಿವಿಧ ಸಾರ್ವಜನಿಕ ಗಣೇಶೋತ್ಸವಗಳಿಗೆ ಶುಕ್ರವಾರ ಬಾಂಬ್ ನಿಷ್ಕ್ರಿಯ ದಳದವರು ಭೇಟಿ ನೀಡಿ, ತಪಾಸಣೆ ನಡೆಸಿದರು.
ಗಜಾನನೋತ್ಸವಗಳಲ್ಲಿ ಅವಘಡಗಳು ಸಂಭವಿಸದಿರಲೆಂದು ಮುನ್ನೆಚ್ಚರಿಕೆ ಕ್ರಮವಾಗಿ ಶಿರಸಿ ಉಪವಿಭಾಗಕ್ಕೆ ಒಂದು ಬಾಂಬ್ ನಿಷ್ಕ್ರಿಯ ದಳವನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅದರ ಭಾಗವಾಗಿ ಶಿರಸಿ ಉಪವಿಭಾಗ ವ್ಯಾಪ್ತಿಯ ಸಾರ್ವಜನಿಕ ಗಜಾನನೋತ್ಸವಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಯಲ್ಲಾಪುರದ ಕಾಳಮ್ಮನಗರ, ನೂತನ ನಗರ, ಟಿಳಕ ಚೌಕ, ಕಿರವತ್ತಿ, ಹೊಸಳ್ಳಿ ಸೇರಿದಂತೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾದ 8 ಸಾರ್ವಜನಿಕ ಗಣೇಶೋತ್ಸವದ ಮಂಟಪಗಳಲ್ಲಿ ಬಾಂಬ್ ನಿಷ್ಕ್ರಿಯ ದಳದವರು ತಪಾಸಣೆ ನಡೆಸಿದರು. ಇದು ಸಹಜವಾದ ತಪಾಸಣೆಯಾಗಿದ್ದು, ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆ ವಿವಿಧ ಗಣೇಶೋತ್ಸವ ಮಂಟಪಗಳಿಗೆ ಬಾಂಬ್ ನಿಷ್ಕ್ರಿಯ ದಳದವರು ಬರುತ್ತಿದ್ದಂತೆ ಪಟ್ಟಣದಲ್ಲಿ ಹಲವು ವದಂತಿಗಳು ಹಬ್ಬಿದ್ದವು. ‘ಬಾಂಬ್ ಇಟ್ಟಿರುವ ಬಗ್ಗೆ ಕರೆ ಬಂದಿದೆ’, ‘ಯಾರೋ ದೊಡ್ಡ ರಾಜಕಾರಣಿಗಳು ಬರಲಿದ್ದಾರೆ’ ಎಂದೆಲ್ಲ ವದಂತಿಗಳು ಹರಡಲಾರಂಭಿಸಿದ್ದವು. ಆದರೆ ಇದು ಅವರ ಕರ್ತವ್ಯದ ಭಾಗವಷ್ಟೇ ಎಂಬ ವಿಚಾರ ಎಲ್ಲ ವದಂತಿಗಳಿಗೆ ತೆರೆ ಎಳೆದಿದೆ.







