ಯಲ್ಲಾಪುರ ತಾ.ಪಂ ಸಭಾಭವನದಲ್ಲಿ ನಡೆದ ತಾಲೂಕು ಗ್ಯಾರಂಟಿ ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ಬೆಲ್ತರಗದ್ದೆಯ ಬುಡಕಟ್ಟು ಸಮುದಾಯದ ಮಹಿಳೆ ಸಾವಿನ ವಿಚಾರ ಪ್ರತಿಧ್ವನಿಸಿತು.
ಹಿಂದೊಮ್ಮೆ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಎಂ.ಎಲ್.ಸಿ ವಿಷಯವನ್ನು ಅಧ್ಯಕ್ಷ ಉಲ್ಲಾಸ ಶಾನಭಾಗ ಮತ್ತೆ ಪ್ರಸ್ತಾಪಿಸಿದರು. ಎಂ.ಎಲ್.ಸಿ ಅವರು ಬೇರೆಯವರ ಬಗ್ಗೆ ವೃಥಾ ಆರೋಪ ಮಾಡದೇ, ಜಿಲ್ಲೆಯಲ್ಲಿ ಎಷ್ಟು ಸಿದ್ದಿ ಸಮುದಾಯದವರಿದ್ದಾರೆ, ಅವರಿಗೆ ಸರ್ಕಾರದ ಸೌಲಭ್ಯಗಳು ತಲುಪುತ್ತಿವೆಯೇ ಎಂಬುದನ್ನು ನೋಡಬೇಕೆಂದು ತಿಳಿಸಿದರು.
ಈ ಹಿಂದೆ ನಡೆದ ಸಭೆಯಲ್ಲೂ ಎಂ.ಎಲ್.ಸಿ ಅವರು ಬೆಲ್ತರಗದ್ದೆ ಮಹಿಳೆ ಸಾವಿನ ವಿಚಾರದಲ್ಲಿ ಜವಾಬ್ದಾರಿ ಅರಿತು ಮಾತನಾಡಬೇಕು ಎಂದು ಎಂ.ಎಲ್.ಸಿ ಅವರ ಸುದ್ದಿಯನ್ನೇ ಮಾತನಾಡಿದ್ದರು. ಆದರೆ ಎಂ.ಎಲ್.ಸಿ ಹೆಸರು ಮಾತ್ರ ಹೇಳಲಿಲ್ಲ. ಈ ದಿನವೂ ತಾಲೂಕು ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲೂ ಹಾಗೇ, ಎಂ.ಎಲ್.ಸಿ ಯಾರೆಂದು ಹೆಸರು ಹೇಳಿಲ್ಲ.
ಪಟ್ಟಣ ಪಂಚಾಯಿತಿ ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೂ ಅದೇ ಗೊಂದಲ ಉಂಟಾಗಿತ್ತು. ಯಾರೋ ಬಗ್ಗೆ ವೃಥಾ ಆರೋಪ ಮಾಡುವ ಎಂ.ಎಲ್.ಸಿ ಯಾರಿರಬಹುದೆಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಬೆಲ್ತರಗದ್ದೆ ಮಹಿಳೆ ಸಾವಿನ ನಂತರ ಎಂ.ಎಲ್.ಸಿ ಶಾಂತಾರಾಮ ಸಿದ್ದಿ ಪತ್ರಿಕಾಗೋಷ್ಠಿ ಮೂಲಕ ಗ್ಯಾರಂಟಿ ಸಮಿತಿಯ ಮೇಲೆ ಆರೋಪ ಮಾಡಿದ್ದರು. ಗ್ಯಾರಂಟಿ ಸಮಿತಿ ಅಧ್ಯಕ್ಷರು ಹೇಳಿದ ಎಂ.ಎಲ್.ಸಿ ಸಹ ಅವರೇ ಇರಬಹುದೆಂದು ವಿಶ್ಲೇಷಿಸಲಾಗುತ್ತಿದೆ.







