‘ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ’
ಅಂಕೋಲಾ: `ಕರಾವಳಿ ಭಾಗದಲ್ಲಿ ಕೃಷಿ ನಾಶವಾದರೆ ಈ ಭಾಗದ ಸಂಸ್ಕೃತಿಯೇ ನಾಶವಾದ ಹಾಗೆ’ ಎನ್ನುವ ನ್ಯಾಯವಾದಿ ನಾಗರಾಜ ನಾಯಕ ಕಳೆದ 11 ವರ್ಷಗಳಿಂದ ಅಂಕೋಲಾದಲ್ಲಿ `ಕೃಷಿ ಹಬ್ಬ’ ನಡೆಸುತ್ತಿದ್ದಾರೆ. ಪ್ರಸ್ತುತ ಅಗಸ್ಟ 11ರಂದು 12ನೇ ವರ್ಷದ `ಕೃಷಿ ಹಬ್ಬ’ ಬಾಸಗೋಡಿನಲ್ಲಿ ನಡೆಯಲಿದೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಹ ಇಲ್ಲಿ ಆಗಮಿಸಿ ಉಳುಮೆ ಮಾಡಿದ್ದಾರೆ. ಇದರೊಂದಿಗೆ ಮಾದಾರ ಚೆನ್ನಯ್ಯ ಸ್ವಾಮೀಜಿ, ಮೋಹನ ಆಳ್ವ, ಪತ್ರಕರ್ತ ವಿಶ್ವೇಶ್ವರ ಭಟ್ಟ, ಅಜಿತ ಹನುಮಕ್ಕನವರ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಗುರುರಾಜ ಗಂಟಿಹೊಳೆ, ವಾಯ್.ಎಸ್.ವಿ ದತ್ತ, ದಿನಕರ ಶೆಟ್ಟಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶ್ರೀಗಂಧ ಬೆಳೆಗಾರ್ತಿ ಕವಿತಾ ಮಿಶ್ರಾ ಮೊದಲಾದವರನ್ನು ಗದ್ದೆಗೆ ಇಳಿಸಿದ ಹಿರಿಮೆ ಈ ಹಬ್ಬಕ್ಕಿದೆ.
ಸಣ್ಣ ಹಿಡುವಳಿದಾರರು ಅಧಿಕವಾಗಿರುವ ಕರಾವಳಿಯಲ್ಲಿ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗಿದ್ದು, ಕರಾವಳಿಯ ಬಹುಪಾಲು ಜನ ವಿವಿಧ ಕಾರಣಗಳಿಂದ ಕೃಷಿ ಕಾಯಕದಿಂದ ದೂರವಾಗುತ್ತಿದ್ದಾರೆ. ಸಾವಿರಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಕ್ಷೇತ್ರಗಳು ಇದೀಗ ಬರಡಾಗುತ್ತಿದ್ದು, ಕೃಷಿ ಉತ್ತೇಜನಕ್ಕಾಗಿ ತಮ್ಮ ಎಲ್ಲಾ ಕೆಲಸಗಳಿಗೆ ರಜೆ ಹಾಕಿ ನಾಗರಾಜ ನಾಯಕ ಪ್ರತಿ ವರ್ಷ ಉಳುಮೆ ಮಾಡುವುದಕ್ಕಾಗಿ ಒಂದು ದಿನ ಮೀಸಲಿಟ್ಟಿದ್ದಾರೆ. ತಮ್ಮ ಜೊತೆ ಇಡೀ ಊರಿನ ಜನರ ಜೊತೆ ವಿವಿಧ ಕ್ಷೇತ್ರದ ಗಣ್ಯರನ್ನು ಕರೆಯಿಸಿ ಕೃಷಿ ಚಟುವಟಿಕೆಗೆ ಉತ್ತೇಜನ ನೀಡುವ ಪ್ರಯತ್ನ ಮಾಡುತ್ತಿದ್ದಾರೆ.
ಈ ಬಾರಿ ಬಾಸಗೋಡ ಗ್ರಾಮದಲ್ಲಿ ನಡೆಯುವ ಕೃಷಿ ಹಬ್ಬಕ್ಕೆ ಉತ್ಪನ್ನಗಳ ರಫ್ತು ಮತ್ತು ಮಾರಾಟ ಸಂಸ್ಥೆಯನ್ನು ಹೊಂದಿರುವ ಎಚ್.ಎಸ್ ಶೆಟ್ಟಿ ಆಗಮಿಸಲಿದ್ದಾರೆ. ಹಳ್ಳಿಕಾರ ಹಸುಗಳ ಸಂಕುಲವನ್ನು ಕಾಯುತ್ತಿರುವ ವರ್ತೂರ ಸಂತೋಷ ಅವರು `ಕೃಷಿ ಭೀಮ’ ಪ್ರಶಸ್ತಿ ಸ್ವೀಕರಿಸಲಿದ್ದಾರೆ.





Discussion about this post