`ಶಿಸ್ತಿನ ಇಲಾಖೆ ಎಂದು ಹೆಸರು ಪಡೆದಿರುವ ಪೊಲೀಸ್ ಇಲಾಖೆಯಲ್ಲಿ ಕೊಂಚ ಅಶಿಸ್ತು ಕಂಡುಬoದರೂ ಅದನ್ನು ಸಹಿಸುವುದಿಲ್ಲ’ ಎಂದು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅಧೀನ ಅಧಿಕಾರಿಗಳಿಗೆ ಸಂದೇಶ ರವಾನಿಸಿದ್ದಾರೆ. ಜನಪ್ರತಿನಿಧಿಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಪೊಲೀಸ್ ಅಧಿಕಾರಿಗಳಿಗೂ ಅವರು ಬಿಸಿ ಮುಟ್ಟಿಸಿದ್ದಾರೆ.
ಎಸ್ಪಿ ಎಂ ನಾರಾಯಣ ಅವರು ಈ ಹಿಂದೆ ಭಟ್ಕಳದಲ್ಲಿ ಡಿವೈಎಸ್ಪಿ ಆಗಿದ್ದರು. ಹೀಗಾಗಿ ಆ ಭಾಗದ ಪ್ರತಿ ಮಾಹಿತಿಯೂ ಅವರ ಗಮನಕ್ಕಿದ್ದು, ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲವೇ? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿತ್ತು. ಮುರುಡೇಶ್ವರ ಪೊಲೀಸರು ಮೌನವಹಿಸಿದ ಕಾರಣ ಕಾರವಾರ ಅಪರಾಧ ಠಾಣೆಯ ಪೊಲೀಸ್ ಅಧಿಕಾರಿಗಳು ಮುರುಡೇಶ್ವರದ ಹೈಲ್ಯಾಂಡ್ ಲಾಡ್ಜಿನ ಮೇಲೆ ದಾಳಿ ನಡೆಸಿ ಅಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆಯನ್ನು ನಿಲ್ಲಿಸಿದ್ದರು.
ಅಶಿಸ್ತು, ಬೇಜವಬ್ದಾರಿ ಹಾಗೂ ದುರ್ನಡತೆ ತೋರಿದ ಆರೋಪದ ಅಡಿ ಮುರುಡೇಶ್ವರದ ಪಿಎಸ್ಐ ಮಂಜುನಾಥ ಅವರನ್ನು ಅಮಾನತು ಮಾಡಿ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಆದೇಶ ಹೊರಡಿಸಿದ್ದಾರೆ. ಮುರುಡೇಶ್ವರದ ಹೈಲ್ಯಾಂಡ್ ಹೋಟೆಲ್’ನಲ್ಲಿ ನಡೆದ ಅನೈತಿಕ ಚಟುವಟಿಕೆ ತಡೆಗೆ ವಿಫಲರಾದ ಹಿನ್ನಲೆ ಪಿಎಸ್ಐ ತಲೆದಂಡವಾಗಿದೆ. ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿದ್ದರೂ ಅದನ್ನು ಪಿಎಸ್ಐ ಮಂಜುನಾಥ ತಡೆದಿರಲಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತಿದ್ದ ಮಂಜುನಾಥ ಅವರು ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಕಾರವಾರದ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿಗಳು ಲಾಡ್ಜ ಮೇಲೆ ದಾಳಿ ನಡೆಸಿದ್ದರು. ಆಗ ಅಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದವರು ಸಿಕ್ಕಿ ಬಿದ್ದಿದ್ದು, ಇದರಿಂದ ಪಿಎಸ್ಐ ಮಂಜುನಾಥ ಅವರು ಕರ್ತವ್ಯ ಲೋಪ ಎಸಗಿರುವುದು ಸಾಬೀತಾಗಿದೆ.
ಇದನ್ನೂ ಓದಿ: ಪ್ರವಾಸಿ ತಾಣದಲ್ಲಿ ಮೈ ಮಾರಾಟ ದಂಧೆ
ಈ ಹಿನ್ನಲೆ ಪೊಲೀಸ್ ಅಧಿಕ್ಷಕ ಎಂ ನಾರಾಯಣ ಪಿಎಸ್ಐ ಮಂಜುನಾಥ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ಮಂಜುನಾಥ ಅವರ ಮೇಲೆ ನಿಗಾ ಇರಿಸದ ಹಾಗೂ ಅವರಿಗೆ ಸೂಕ್ತ ಮಾರ್ಗದರ್ಶನ ಮಾಡದ ಭಟ್ಕಳ ಗ್ರಾಮೀಣ ಸಿಪಿಐ ಮೇಲೆ ಸಹ ಕ್ರಮ ಜರುಗಿಸಿದ್ದಾರೆ. ಕಳೆದ ವಾರ ಪೊಲೀಸ್ ಖಾತೆಗೆ ಜಮಾ ಆಗಬೇಕಿದ್ದ ಹಣವನ್ನು ಚಿನ್ನದ ವ್ಯಾಪಾರಿ ಖಾತೆಗೆ ಜಮಾ ಮಾಡಿಸಿದ್ದ ಆರೋಪದ ಅಡಿ ಪಿಎಸ್ಐ ಯಲ್ಲಪ್ಪ ಮಾದರ್ ಅವರನ್ನು ಅಮಾನತು ಮಾಡಿದ್ದರು. ಓಸಿ-ಮಟ್ಕಾ ವಿಷಯದಲ್ಲಿ ಸಹ ಎಂ ನಾರಾಯಣ ಅವರು ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿದ್ದು, ಪ್ರತಿ ಠಾಣೆಯವರಿಗೂ ಜೂಜಾಟ ತಡೆಯುವಂತೆ ಸೂಚನೆ ನೀಡಿದ್ದಾರೆ. ಪ್ರಸ್ತುತ ಕರ್ತವ್ಯಲೋಪ ಎಸಗಿದವರನ್ನು ಅಮಾನತು ಮಾಡುವ ಮೂಲಕ `ತಪ್ಪು ಮಾಡಿದ ಯಾರನ್ನೂ ಕ್ಷಮಿಸುವುದಿಲ್ಲ’ ಎಂದು ಸಂದೇಶ ರವಾನಿಸಿದ್ದಾರೆ.





