`ಸರ್ಕಾರ ನೀಡುವ ಗೃಹಲಕ್ಷ್ಮಿ ಹಣ ಮಹಿಳೆಯರ ಉಪಯೋಗಕ್ಕಾಗಿದ್ದು, ಅದನ್ನೂ ಯಾವುದೇ ಕಾರಣಕ್ಕೂ ಗಂಡನಿಗೆ ಕೊಡಬೇಡಿ. ಈ ವಿಷಯಕ್ಕಾಗಿ ಗಂಡನ ಜೊತೆ ಜಗಳವನ್ನು ಮಾಡಬೇಡಿ’ ಎಂದು ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಮಹಿಳೆಯರಿಗೆ ಕಿವಿಮಾತು ಹೇಳಿದ್ದಾರೆ. `ಗೃಹಲಕ್ಷ್ಮಿ ಹಣ ಗಂಡನಿಗೆ ಕೊಡುತ್ತೀರಾ? ಎಂದು ಆರ್ ವಿ ದೇಶಪಾಂಡೆ ಪ್ರಶ್ನಿಸಿದಾಗ `ಇಲ್ಲ’ ಎಂದು ಮಹಿಳೆಯರು ತಲೆ ಅಲ್ಲಾಡಿಸಿದರು.
ಯಲ್ಲಾಪುರದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು `ಸರ್ಕಾರ ಪ್ರತಿ ತಿಂಗಳು ನೀಡುವ ಹಣವನ್ನು ಮಕ್ಕಳ ಶಿಕ್ಷಣ, ಪೌಷ್ಠಿಕ ಆಹಾರ ಹಾಗೂ ವೈಯಕ್ತಿಕ ಕೆಲಸಗಳ ಈಡೇರಿಕೆಗೆ ಬಳಸಿಕೊಳ್ಳಿ’ ಎಂದು ಸಲಹೆ ನೀಡಿದರು. `ಹೆಣ್ಣು ಮಕ್ಕಳು ಅತ್ಯಂತ ಜಾಣರು. ಹೀಗಾಗಿ ಸರ್ಕಾರ ಅವರ ಕೈಗೆ ಮನೆಯ ಚಾವಿ ನೀಡಿದೆ. ಸರ್ಕಾರ ನೀಡುವ ಹಣವನ್ನು ಮಹಿಳೆಯರು ಸರಿಯಾದ ರೀತಿ ಬಳಸಿಕೊಳ್ಳಬೇಕು’ ಎಂದು ಕರೆ ನೀಡಿದರು. `ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಲಾಗಿದೆ. ಧರ್ಮಸ್ಥಳ ಸೇರಿ ಎಲ್ಲಾ ಪುಣ್ಯಕ್ಷೇತ್ರಗಳಿಗೆ ಓಡಾಡುವ ಮಹಿಳೆಯರು ಶಾಲಾ ಮಕ್ಕಳ ಬಗ್ಗೆ ಕಾಳಜಿ ಇರಬೇಕು. ಶಾಲಾ ಮಕ್ಕಳು ಬಂದಾಗ ಅವರಿಗೆ ಆಸನ ಬಿಟ್ಟುಕೊಡಬೇಕು’ ಎಂದು ಮನವಿ ಮಾಡಿದರು. `ಗೃಹಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ಬಿಲ್ ನೀಡಲಾಗಿದ್ದು, ಇದರಿಂದ ಅನೇಕರ ವಿದ್ಯುತ್ ಹೊರೆ ಕಡಿಮೆಯಾಗಿದೆ. ಉಚಿತ ಎಂದು ಅನಗತ್ಯವಾಗಿ ಯಾವುದನ್ನೂ ಬಳಸಬೇಡಿ’ ಎಂದು ಹೇಳಿದರು. `ಅನ್ನಭಾಗ್ಯ ಯೋಜನೆ ಅಡಿ 5 ಕೆಜಿ ಅಕ್ಕಿ ಕೊಡಲಾಗುತ್ತಿತ್ತು. ಯಾರೂ ಕೇಳದೇ ಇದ್ದರೂ ಸರ್ಕಾರ 10 ಕೆಜಿ ಅಕ್ಕಿಯನ್ನು ಸರ್ಕಾರ ನೀಡುತ್ತಿದೆ’ ಎಂದರು.
ಅಕ್ಕಿ ಹಣ ಬಂದಿಲ್ಲ!
ಈ ವೇಳೆ ನೆರೆದಿದ್ದ ಮಹಿಳೆಯರು `ಅಕ್ಕಿ ಹಣ ಬಂದಿಲ್ಲ’ ಎಂದು ತಿಳಿಸಿದ್ದು, `ಬ್ಯಾಂಕ್ ಸಮಸ್ಯೆಯಿಂದ ಹಣ ಜಮಾ ಆಗಿಲ್ಲ. ಸರ್ಕಾರದ ಹಣ ಬಂದೇ ಬರುತ್ತದೆ’ ಎಂದು ಭರವಸೆ ನೀಡಿದರು. `ಅಕ್ಕಿ ಹಣ ಬೇಕಾ ಬೇಡವಾ?’ ಎಂದು ಪ್ರಶ್ನಿಸಿದಾಗ ನೆರೆದಿದ್ದ ಮಹಿಳೆಯರು ಒಕ್ಕೂರಿಲನಿಂದ ಬೇಕು’ ಎಂದು ಕೂಗಿದರು.
ಶಾಸಕರಿಗೆ ಕಿವಿ ಕೇಳಲ್ವಂತೆ!
ಆರ್ ವಿ ದೇಶಪಾಂಡೆಯವರ ಮಾತಿನ ಮಧ್ಯೆ ನೆರೆದಿದ್ದ ವ್ಯಕ್ತಿಯೊಬ್ಬರು `ರೈತರ ಪಂಪ್ಸೆಟ್’ಗೆ ಆಧಾರ್ ಲಿಂಕ್ ಮಾಡುವ ನೆಪದಲ್ಲಿ ಹಣ ತುಂಬಿಸಿಕೊಳ್ಳುತ್ತಿದ್ದಾರೆ’ ಎಂದು ದೂರಿದರು. ಅದಕ್ಕೆ ಪ್ರತಿಕ್ರಿಯಿಸಿದ ಆರ್ ವಿ ದೇಶಪಾಂಡೆ `ನನಗೆ ಕೊಂಚ ಕಿವಿ ಮಂದವಾಗಿದೆ. ಸಭೆ ಮುಗಿದ ನಂತರ ಈ ಬಗ್ಗೆ ಚರ್ಚಿಸೋಣ’ ಎಂದರು.
ಯುವನಿಧಿಗೆ ಯುವಕರ ನಿರಾಸಕ್ತಿ
ಉತ್ತರ ಕನ್ನಡ ಜಿಲ್ಲೆಯಲ್ಲಿ 4070 ಜನ ಮಾತ್ರ ಯುವನಿಧಿ ಹಣ ಪಡೆಯುತ್ತಿದ್ದು, ಇಷ್ಟು ಕಡಿಮೆ ಪ್ರಮಾಣದ ಸಂಖ್ಯೆಯ ಬಗ್ಗೆ ಆರ್ ವಿ ದೇಶಪಾಂಡೆ ಅಚ್ಚರಿ ವ್ಯಕ್ತಪಡಿಸಿದರು. ಯಲ್ಲಾಪುರ ತಾಲೂಕಿನಲ್ಲಿ 213 ಯುವಕರಿಗೆ ಮಾತ್ರ ಈ ಹಣ ದೊರೆಯುತ್ತಿದೆ. ಜಿಲ್ಲೆಯಲ್ಲಿ ಯುವಕರಿಲ್ಲವೇ? ಎಂದು ಆರ್ ವಿ ದೇಶಪಾಂಡೆ ಪ್ರಶ್ನಿಸಿದರು. `ಗ್ಯಾರಂಟಿ ಸಮಿತಿಯಲ್ಲಿ 185 ಜನ ಸದಸ್ಯರಿದ್ದು ಅವರೆಲ್ಲರೂ ಸೇರಿ ಯುವಕರಿಗೆ ಯುವನಿಧಿಯ ಯೋಜನೆ ತಲುಪಿಸಬೇಕು’ ಎಂದು ಸೂಚಿಸಿದರು. `ಆರ್ಥಿಕವಾಗಿ ಸಬಲರಾಗಿದ್ದವರು ಈ ಯಾವುದೇ ಯೋಜನೆಗೆ ಅರ್ಜಿ ಹಾಕಬಾರದು’ ಎಂದವರು ಮನವಿ ಮಾಡಿದರು.
ಯೋಜನೆ ಬೇಡ ಎನ್ನುವವರೇ ದೊಡ್ಡವರು!
ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ `ಆರ್ಥಿಕವಾಗಿ ಸಬಲರಾಗಿದ್ದವರು ಈ ಯೋಜನೆ ಪಡೆಯಬಾರದು. ನಿಜವಾಗಿಯೂ ಬಡತನ ರೇಖೆಗಿಂತ ಕೆಳಗಿದ್ದವರು ಮಾತ್ರ ಈ ಯೋಜನೆ ಪಡೆಯಬೇಕು. ಎಲ್ಲರಿಗೂ ಫಲಾನುಭವಿ ಆಗುವ ಅರ್ಹತೆ ಇದೆ. ಆದರೆ, ನಾವು ಈ ಯೋಜನೆಗೆ ಅರ್ಹರೇ? ಎಂದು ಅವರೇ ನಿರ್ಣಯಿಸಿಕೊಳ್ಳಬೇಕು. ಸ್ವಯಂ ಪ್ರೇರಣೆಯಿಂದ ಯೋಜನೆ ಬಿಟ್ಟುಕೊಡುವವರೇ ದೊಡ್ಡವರು’ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾತನಾಡಿ `ಕೊರೊನಾ ಹಾಗೂ ಆರ್ಥಿಕ ಸಂಕಷ್ಟದ ನಡುವೆಯೂ ಕಾಂಗ್ರೆಸ್ ನಾಯಕರು ಪಂಚ ಗ್ಯಾರಂಟಿಯ ನಿರ್ಣಯ ಕೈಗೊಂಡಿದ್ದು, ಸರ್ಕಾರ ರಚನೆಯಾದ 6 ತಿಂಗಳ ಒಳಗೆ ಪಂಚ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಅಧಿಕಾರಿಗಳು ಹಾಗೂ ಗ್ಯಾರಂಟಿ ಸಮಿತಿ ಸದಸ್ಯರು ಮನೆ ಮನೆಗೆ ತೆರಳಿ ಈ ಯೋಜನೆಯನ್ನು ಅರ್ಹರಿಗೆ ತಲುಪಿಸಬೇಕು’ ಎಂದರು. `ಸರ್ಕಾರಿ ಯೋಜನೆಯನ್ನು ಮನೆ ಮನೆಗೆ ಮುಟ್ಟಿಸುವುದು ಪುಣ್ಯದ ಕೆಲಸ. ಈ ಪುಣ್ಯದ ಕೆಲಸದಲ್ಲಿ ಗ್ಯಾರಂಟಿ ಸಮಿತಿ ಸದಸ್ಯರು ಭಾಗಿಯಾಗಬೇಕು’ ಎಂದು ಸೂಚಿಸಿದರು. `ಗ್ಯಾರಂಟಿ ಯೋಜನೆ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದಾಗ ವಿರೋಧ ಪಕ್ಷಗಳು ಸಾಕಷ್ಟು ಅಪಪ್ರಚಾರ ಮಾಡಿದ್ದರು. ಆದರೆ, ಸರ್ಕಾರ ರಚನೆಯಾದ ನಂತರ 56 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗೆ ಮೀಸಲಿಟ್ಟು ಸರ್ಕಾರ ನುಡಿದಂತೆ ನಡದಿದೆ’ ಎಂದರು.




