ಗ್ರಾಮ ಪಂಚಾಯತಗಳಿಗೆ ಸರ್ಕಾರದಿಂದ ಸೂಕ್ತ ಅನುದಾನ ಬಾರದ ಬಗ್ಗೆ ಶಾಸಕ-ಸಚಿವರಲ್ಲಿ ಹೇಳಿಕೊಂಡ ಗ್ರಾ ಪಂ ಸದಸ್ಯರೂ ಆಗಿರುವ ಕಾಂಗ್ರೆಸ್ ಹಿರಿಯ ಕಾರ್ಯಕರ್ತ ಎಂ ಕೆ ಭಟ್ಟ ಯಡಳ್ಳಿ ಅವರ ನಡೆಗೆ ಶಾಸಕ ಆರ್ ವಿ ದೇಶಪಾಂಡೆ ಗರಂ ಆದರು. ವೇದಿಕೆಯಲ್ಲಿ ಎಲ್ಲರ ಮುಂದೆ ಗ್ರಾ ಪಂ ಸಮಸ್ಯೆ ಬಗ್ಗೆ ಹೇಳಿಕೊಂಡ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸಹ ಅಸಮಧಾನ ವ್ಯಕ್ತಪಡಿಸಿದರು.
ಯಲ್ಲಾಪುರದಲ್ಲಿ ಗ್ಯಾರಂಟಿ ಸಮಿತಿ ಕಚೇರಿ ಉದ್ಘಾಟನೆಯ ಸಭಾ ಕಾರ್ಯಕ್ರಮದ ನಿರ್ವಹಣೆ ಮಾಡುತ್ತಿದ್ದ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಸಂಚಾಲಕ ಎಂ ಕೆ ಭಟ್ಟ ಯಡಳ್ಳಿ ಸಭೆಯಲ್ಲಿ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು. ಈ ವೇಳೆ ಮೈಕ್ ಹಿಡಿದಿದ್ದ ಅವರು `ಗ್ರಾಮ ಪಂಚಾಯತಗಳು ಅಭಿವೃದ್ಧಿ ಶೂನ್ಯವಾಗಿದೆ. ಸಣ್ಣ ಸಣ್ಣ ಅಭಿವೃದ್ಧಿ ಕೆಲಸ ಮಾಡಲು ಸದಸ್ಯರಿಗೆ ಹಣ ಬರುತ್ತಿಲ್ಲ. ಸರ್ಕಾರಕ್ಕೆ ಸಾಕಷ್ಟು ಕ್ರಿಯಾ ಯೋಜನೆ ಮಾಡಿ ಕಳುಹಿಸಿದರೂ ಹಣ ಮಂಜೂರಿ ಆಗುತ್ತಿಲ್ಲ. ಕಸ ವಿಲೇವಾರಿ ವಾಹನಕ್ಕೆ ಪೆಟ್ರೋಲ್ ಹಾಕಲು ಸಹ ಕಾಸಿಲ್ಲ’ ಎಂದು ಸಮಸ್ಯೆ ಬಗ್ಗೆ ವಿವರಿಸಿದರು. ಇನ್ನಷ್ಟು ಸಮಸ್ಯೆಗಳ ಬಗ್ಗೆ ವಿವರಿಸುತ್ತಿದ್ದಾಗಲೇ `ಮನವಿ ಓದುವುದನ್ನು ನಿಲ್ಲಿಸಿ’ ಎಂದು ವೇದಿಕೆಯಲ್ಲಿದ್ದವರು ತಾಕೀತು ಮಾಡಿದರು.
ಎಂ ಕೆ ಭಟ್ಟ ಯಡಳ್ಳಿ ಅವರ ಮಾತು ಕೇಳಿ ಕೆಂಡಾಮoಡಲವಾದ ಶಾಸಕ ಆರ್ ವಿ ದೇಶಪಾಂಡೆ ಸರ್ಕಾರ `56 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟು ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಅದರಿಂದ ಆಗುವ ಪ್ರಯೋಜನ ಹೇಳುವುದು ಬಿಟ್ಟು ಸಮಸ್ಯೆಗಳ ಬಗ್ಗೆ ವೇದಿಕೆಯಲ್ಲಿ ಮಾತನಾಡುತ್ತೀರಾ?’ ಎನ್ನುತ್ತ ಸಿಡಿಮಿಡಿಗೊಂಡರು. `ಸಭೆಯಲ್ಲಿ ಏನು ಮಾತನಾಡುವುದು ಇದ್ದರೂ ಅನುಮತಿ ಪಡೆಯಬೇಕು. ಎಲ್ಲಾ ಕಡೆ ಮನವಿ ಸಲ್ಲಿಸಿ ಸುಮ್ಮನಾಗುತ್ತಾರೆ. ಅದನ್ನು ಓದಿ ಹೇಳುವ ಅಗತ್ಯವೇನು?’ ಎಂದು ಪ್ರಶ್ನಿಸಿದರು. `ನಿಮ್ಮ ಖಾತೆಗೆ ಹಣ ಹಾಕುವುದನ್ನು ಬಿಟ್ಟು ಅವರ ಸಮಸ್ಯೆ ಬಗೆಹರಿಸಬೇಕಾ’? ಎಂದು ನೆರೆದಿದ್ದ ಮಹಿಳೆಯರನ್ನು ಆರ್ ವಿ ದೇಶಪಾಂಡೆ ಪ್ರಶ್ನಿಸಿದ್ದು ಆಗ ಅಲ್ಲಿದ್ದವರು `ಬೇಡ ಬೇಡ’ ಎಂದು ಕೂಗಿದರು.
ಇದನ್ನೂ ಓದಿ: ಗಂಡನಿಗೆ ಇಲ್ಲ ಸರ್ಕಾರಿ ಹಣ!
`ಸರ್ಕಾರದ ಗ್ಯಾಂರಟಿ ಯೋಜನೆ ನಿಲ್ಲಿಸಬೇಕು ಎಂದು ನಾನು ಹೇಳಿಲ್ಲ. ಅಪಾರ್ಥ ಮಾಡಿಕೊಳ್ಳದೇ ನಮ್ಮ ಸಮಸ್ಯೆ ಬಗ್ಗೆಯೂ ಗಮನಹರಿಸಿ’ ಎಂದು ಎಂ ಕೆ ಭಟ್ಟ ಯಡಳ್ಳಿ ಅವಲತ್ತುಕೊಂಡರು. ಈ ವೇಳೆ ಶಾಸಕ ಶಿವರಾಮ ಹೆಬ್ಬಾರ್ ಮದ್ಯೆ ಪ್ರವೇಶಿಸಿ ಎಂ ಕೆ ಭಟ್ಟವರಿಗೆ ಸುಮ್ಮನಿರುವಂತೆ ಸೂಚಿಸುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು. ಸಭಾ ಕಾರ್ಯಕ್ರಮ ಮುಗಿದ ನಂತರ ಆರ್ ವಿ ದೇಶಪಾಂಡೆ, ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಮಂಕಾಳು ವೈದ್ಯರನ್ನು ಮತ್ತೆ ಭೇಟಿ ಮಾಡಿದ ಎಂ ಕೆ ಭಟ್ಟ ಅವರು ಇನ್ನೊಮ್ಮೆ ಸಮಸ್ಯೆಗಳ ಬಗ್ಗೆ ತಿಳಿಸಿದರು.




