ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರ ಸ್ವ ಕ್ಷೇತ್ರದಲ್ಲಿ ಕಾರವಾರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅಬ್ಬರಿಸಿದ್ದಾರೆ. ಯಲ್ಲಾಪುರ ತಾಲೂಕಿಗೆ ಆಗಮಿಸಿದ ರೂಪಾಲಿ ನಾಯ್ಕ ಶಿವರಾಮ ಹೆಬ್ಬಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದಲ್ಲದೇ ಶಿವರಾಮ ಹೆಬ್ಬಾರ್ ಅವರ ಹಿಡಿತದಲ್ಲಿರುವ ಅರಬೈಲು ಗ್ರಾಮದ ಕೆಲವರನ್ನು ಅವರು ಭೇಟಿಯಾಗಿದ್ದು, ಕೆಲವೇ ದಿನಗಳಲ್ಲಿ ಆ ಭಾಗದಲ್ಲಿಯೂ ಸಭೆ ನಡೆಸಿ ಅಲ್ಲಿನವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯ ಅಧಿಕೃತ ಸದಸ್ಯರನ್ನಾಗಿಸುವ ಸಾಧ್ಯತೆ ಹೆಚ್ಚಿದೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷೆಯಾದ ನಂತರ ರಾಜ್ಯದ ನಾನಾ ಭಾಗಗಳಲ್ಲಿ ಪ್ರವಾಸ ಮಾಡುತ್ತಿರುವ ರೂಪಾಲಿ ನಾಯ್ಕ ಎಲ್ಲಡೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಜೊತೆಗೆ ಜಿಲ್ಲೆಯ ಯಾವ ಭಾಗಕ್ಕೆ ಹೋದರೂ ಅವರು ಶಿವರಾಮ ಹೆಬ್ಬಾರ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಬಿಜೆಪಿ ಪಕ್ಷದಿಂದ ಆಯ್ಕೆಯಾದ ಶಿವರಾಮ ಹೆಬ್ಬಾರ್ ಇದೀಗ ಬಿಜೆಪಿ ಬೆಂಬಲಕ್ಕಿಲ್ಲದಿರುವುದು ರೂಪಾಲಿ ಸಿಟ್ಟಿಗೆ ಮೂಲ ಕಾರಣ. ಆದರೆ, ಈವರೆಗೂ ಶಿವರಾಮ ಹೆಬ್ಬಾರ್ ಅವರ ಹಿಡಿತದಲ್ಲಿರುವ ಕ್ಷೇತ್ರಕ್ಕೆ ಆಗಮಿಸಿ ರೂಪಾಲಿ ನಾಯ್ಕ ಅವರ ವಿರುದ್ಧ ಮಾತನಾಡಿರಲಿಲ್ಲ. ಶುಕ್ರವಾರ ಯಲ್ಲಾಪುರ ಪಟ್ಟಣದ ಉದ್ಯಮನಗರಕ್ಕೆ ಆಗಮಿಸಿ ಹೆಬ್ಬಾರ್ ವಿರುದ್ಧ ಮಾತನಾಡಿದ್ದು, ಅಲ್ಲಿದ್ದ ಕೆಲವರ ಮನವೊಲೈಸಿ ಅವರನ್ನು ಬಿಜೆಪಿ ಸದಸ್ಯರನ್ನಾಗಿಯೂ ಮಾಡಿದ್ದಾರೆ.
ಮುಖ್ಯವಾಗಿ ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ರೂಪಾಲಿ ನಾಯ್ಕ ಕಾರ್ಯತಂತ್ರ ರೂಪಿಸಿದ್ದಾರೆ. ಮಹಿಳೆಯರ ಮತ ಪರಿವರ್ತನೆ ಮೂಲಕ ಇಡೀ ಊರನ್ನು ಬಿಜೆಪಿ ಭದ್ರಕೋಟೆಯನ್ನಾಗಿಸುವ ಲೆಕ್ಕಾಚಾರದಲ್ಲಿ ಅವರಿದ್ದಾರೆ. ಉದ್ಯಮ ನಗರದಲ್ಲಿ ಸಹ ಅನೇಕ ಮಹಿಳೆಯರು ರೂಪಾಲಿ ನಾಯ್ಕರ ಮಾತು ಕೇಳಿದ್ದು, ಮನೆ ಮನೆಗೆ ತೆರಳಿ ಅಲ್ಲಿದ್ದವರನ್ನು ಬಿಜೆಪಿ ಸದಸ್ಯರನ್ನಾಗಿಸುವ ಮಾತು ಕೊಟ್ಟಿದ್ದಾರೆ.




