ಶಿರಸಿ: ವಿಪರೀತ ಸರಾಯಿ ಕುಡಿಯುತ್ತಿದ್ದ ಸತೀಶ್ ಬೋವಿ ಎಂಬಾತ ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು ಇದರೊಂದಿಗೆ ಜ್ವರವೂ ಬಂದ ಕಾರಣ ಅದನ್ನು ಸಹಿಸಿಕೊಳ್ಳಲಾಗದೇ ಕುತ್ತಿಗೆಗೆ ಚಾಕು ಇರಿದುಕೊಂಡು ಸಾವನಪ್ಪಿದ್ದಾನೆ.
ನಿರ್ನಳ್ಳಿ ಹೊಸನಗರದ ಸತೀಶ ಹನುಮಂತ ಬೋವಿ (38) ಎಂಬಾತ ಕೂಲಿ ಕೆಲಸ ಮಾಡಿ ಬದುಕುತ್ತಿದ್ದ. ಮೊದಲಿನಿಂದಲೂ ಸರಾಯಿ ಕುಡಿಯುವ ಚಟ ಹೊಂದಿದ್ದ ಈತನಿಗೆ ಕಿಡ್ನಿ ಹಾಗೂ ಲಿವರ್ ಸಮಸ್ಯೆ ಕಾಡುತ್ತಿತ್ತು. ಸೆ 12ರಂದು ಕಾಣಿಸಿಕೊಂಡಿದ್ದ ಜ್ವರ ಸೆ 14ರವರೆಗೂ ಆತನಿಗೆ ಕಾಡುತ್ತಿತ್ತು. ಹೀಗಾಗಿ ಶಿರಸಿ ಆಸ್ಪತ್ರೆಗೆ ತೆರಳಿ ಆತ ಚಿಕಿತ್ಸೆ ಪಡೆದಿದ್ದ. ಆದರೂ ಜ್ವರ ವಾಸಿಯಾಗಿರಲಿಲ್ಲ.
ಈ ಎಲ್ಲಾ ಖಾಯಿಲೆಗಳಿಂದ ಬದುಕಲು ಸಾಧ್ಯವಿಲ್ಲ ಎಂದು ಅರಿತ ಆತ ಆತ್ಮಹತ್ಯೆಯ ಯೋಚನೆ ಮಾಡಿದ್ದ. ಸೆ 15ರಂದು ಆತನ ಪತ್ನಿ ಆಶಾ ಪೇಟೆಗೆ ಹೋದಾಗ ಅಡುಗೆ ಮನೆಗೆ ಹೋಗಿ ಅಲ್ಲಿದ್ದ ಚಾಕುವಿನಿಂದ ಕತ್ತು ಕುಯ್ದುಕೊಂಡಿದ್ದ. ಆ ವೇಳೆ ಅಲ್ಲಿಯೇ ಇದ್ದ ಸತೀಶನ ತಾಯಿ ಚಾಕು ಕಿತ್ತುಕೊಂಡು ಬೊಬ್ಬೆ ಹೊಡೆದಿದ್ದರು.
ಈ ಬೊಬ್ಬೆ ಕೇಳಿ ಅಲ್ಲಿಗೆ ಬಂದ ಸತೀಶನ ಚಿಕ್ಕಪ್ಪ ಮಾರುತಿ ತಿರುಕಪ್ಪ ಬೋವಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಾಕು ಇರಿದುಕೊಂಡ ಪರಿಣಾಮ ಕುತ್ತಿಗೆ ಬಳಿ ಗೀರು ಬಿದ್ದಿದ್ದು, ರಕ್ತ ಸೋರುತ್ತಿತ್ತು. ಶಿರಸಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಸತೀಶನನ್ನು ನಂತರ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಸೆ 20ರಂದು ಆತ ಚಿಕಿತ್ಸೆಗೆ ಸ್ಪಂದಿಸದೇ ಸಾವನಪ್ಪಿದ್ದಾನೆ.




