ಹೊನ್ನಾವರ: ಪ್ರಸಿದ್ಧ ಇಡಗುಂಜಿ ದೇವಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಯೋಗ್ಯರ ಹುಡುಕಾಟ ನಡೆದಿದ್ದು, ಈವರೆಗೂ ಅರ್ಜಿ ಸಲ್ಲಿಸದೇ ಇರುವವರಿಗೆ ಇನ್ನೊಂದು ಅವಕಾಶ ನೀಡಲಾಗಿದೆ.
ವಿನಾಯಕ ದೇವಾಲಯದಲ್ಲಿ ತಾತ್ಕಾಲಿಕವಾಗಿ ಗೌರವಧನದ ಮೇಲೆ ಕೆಲಸ ಮಾಡಲು ಮಣಿಗಾರರು, ಗುಮಾಸ್ತರು, ಮುಖ್ಯ ಅಡುಗೆ ತಯಾರಕರು, ಸಹಾಯಕ ಅಡುಗೆಯವರು/ಊಟ ಬಡಿಸುವವರು, ಭದ್ರತಾ ಸಿಬ್ಬಂದಿ, ಸ್ವಚ್ಛತೆಗಾರರು, ಕಛೇರಿ ಪರಿಚಾರಕ, ಮುಸುರೆ ಒರೆಸುವವರು ಹಾಗೂ ಸ್ಕಾವೇಂಜರ್ ಹುದ್ದೆಗೆ ಯೋಗ್ಯರ ಹುಡುಕಾಟ ನಡೆದಿದೆ. ಮಣಿಗಾರರು, ಗುಮಾಸ್ತರು, ಮುಖ್ಯ ಅಡುಗೆ ತಯಾರಕರು, ಭದ್ರತಾ ಸಿಬ್ಬಂದಿ ಮತ್ತು ಕಚೇರಿ ಪರಿಚಾರಕ ಹುದ್ದೆಗಳಿಗೆ ಆಯ್ಕೆಯಾದವರಿಗೆ ಉಚಿತ ಊಟ ಹಾಗೂ ಉಪಹಾರವನ್ನು ಕೊಡಲಾಗುತ್ತದೆ.
ಮುಖ್ಯ ಅಡುಗೆ ತಯಾರಕರು, ಸಹಾಯಕ ಅಡುಗೆಯವರು/ಊಟ ಬಡಿಸುವವರು, ಸ್ವಚ್ಛತೆಗಾರರು, ಭೋಜನಾಲಯದ ಮುಸುರೆ ಒರೆಸುವವರು, ಸ್ಕಾವೇಂಜರ್ ಹುದ್ದೆಗಳ ಸಂದರ್ಶನ ಅಕ್ಟೋಬರ್ 27ರಂದು ಬೆಳಗ್ಗೆ 10 ಗಂಟೆಗೆ ಕಾರವಾರದ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯಲಿದೆ. ಮಣಿಗಾರರು, ಗುಮಾಸ್ತರು, ಭದ್ರತಾ ಸಿಬ್ಬಂದಿ ಮತ್ತು ಕಚೇರಿ ಪರಿಚಾರಕ ಹುದ್ದೆಗಳಿಗೆ ನವೆಂಬರ್ 3ರಂದು ಬೆಳಗ್ಗೆ 10 ಗಂಟೆಗೆ ಕಾರವಾರ ಜಿಲ್ಲಾ ನ್ಯಾಯಾಲಯದಲ್ಲಿ ಸಂದರ್ಶನ ನಡೆಯಲಿದೆ. ಎಲ್ಲಾ ಸೂಚನೆ ಹಾಗೂ ವಿವರವನ್ನು ಜಿಲ್ಲಾ ನ್ಯಾಯಾಲಯದ ಮಾಹಿತಿ ಫಲಕದಲ್ಲಿ ಹಾಕಲಾಗಿದ್ದು, ಇಡಗುಂಜಿಯ ವಿನಾಯಕ ದೇವಾಲಯದ ಸೂಚನಾ ಫಲಕದಲ್ಲಿ ಸಹ ಅದನ್ನು ನೋಡಬಹುದು. ಅರ್ಜಿ ಹಾಕಿದ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಪ್ರತ್ಯೇಕ ಸೂಚನಪತ್ರ ಸಿಗುವುದಿಲ್ಲ.
18 ವರ್ಷ ಮೇಲ್ಪಟ್ಟು 40 ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಸಿದವರು ಮತ್ತೆ ಅರ್ಜಿ ಸಲ್ಲಿಸಬೇಕಾಗಿಲ್ಲ. ಅರ್ಜಿ ಸಲ್ಲಿಸಲು ಅಕ್ಟೋಬರ್ 21 ಕೊನೆಯ ದಿನ. ಆಸಕ್ತರು ದೇವಾಲಯದ ವಿಳಾಸಕ್ಕೆ ಅರ್ಜಿ ಸಲ್ಲಿಸಿ ಅದರ ಪ್ರತಿಯನ್ನು ಜಿಲ್ಲಾ ನ್ಯಾಯಾಲಯದ ವಿಳಾಸಕ್ಕೂ ಕಳುಹಿಸುವುದು ಉತ್ತಮ.
ಇನ್ನೊಂದು ಸೂಚನೆ: ಇಡಗುಂಜಿಯ ವಿನಾಯಕ ದೇವಾಲಯದ ವಿವಿಧ ಹುದ್ದೆಗಳಿಗೆ ಈ ಹಿಂದೆ ನಿಗದಿಪಡಿಸಲಾಗಿದ್ದ ಸಂದರ್ಶನ ದಿನಾಂಕವನ್ನು ರದ್ದುಪಡಿಸಲಾಗಿದೆ. ಸೆ 22ರಂದು ಹಾಗೂ ಸೆ 29ರಂದು ನಡೆಯಬೇಕಿತ್ತು. ಆದರೆ, ಇದೀಗ ಇನ್ನೊಮ್ಮೆ ಅರ್ಜಿ ಹಾಕುವವರಿಗೆ ಅವಕಾಶ ನೀಡಲಾಗಿದ್ದರಿಂದ ಈ ಹಿಂದೆ ಸಂದರ್ಶನಕ್ಕೆ ನೀಡಿದ ದಿನಾಂಕದAದು ಸಂದರ್ಶನ ನಡೆಯುವುದಿಲ್ಲ.




