ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯನ್ನು `ಗುಡ್ಡಗಾಡು ಜಿಲ್ಲೆ’ ಎಂದು ಘೋಷಿಸಿ ಹೆಚ್ಚಿನ ಪ್ರಾಮುಖ್ಯತೆ ಪಡೆಯಬೇಕು. ಜಿಲ್ಲೆಯನ್ನು ಒಡೆದು ಅಭಿವೃದ್ಧಿ ಮಾಡಲು ಅಸಾಧ್ಯ’ ಎಂದು ಹೋರಾಟಗಾರ ರವೀಂದ್ರ ನಾಯ್ಕ ಹೇಳಿದ್ದಾರೆ.
ಲೋಯಲ್ ವಿಕಾಸ ಕೇಂದ್ರದ ಸಭಾಂಗಣದಲ್ಲಿ ನಡೆದ `ಸಾಂಸ್ಕೃತಿಕ ಕಲಾ ಮೇಳ-2024’ರಲ್ಲಿ ಮಾತನಾಡಿದ ಅವರು `ಅಭಿವೃದ್ದಿ ನೆಪದಲ್ಲಿಯೇ ಉತ್ತರ ಕನ್ನಡ 2-3 ಜಿಲ್ಲೆಯಾಗಿ ವಿಭಜನೆಯ ಅವಶ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು. `ಜಿಲ್ಲೆಯ ಪರಿಸರಕ್ಕೆ ಸಮತೋಲನ ದೃಷ್ಟಿಯಿಂದ ಗುಡ್ಡಗಾಡು ಜಿಲ್ಲೆ ಘೋಷಣೆ ಮತ್ತು ಕಾರ್ಯ ಹೆಚ್ಚು ಪ್ರಾಮುಖ್ಯತೆ ಪಡೆಯುವುದು ಮುಖ್ಯ’ ಎಂದವರು ಹೇಳಿದರು.
`ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕ ಹಿನ್ನಲೆ ಜಿಲ್ಲೆಯ ಅಭಿವೃದ್ದಿ ಮತ್ತು ಭೂಮಿ ಹಕ್ಕಿನ ಪ್ರಗತಿ ಕುಂಠಿತಕ್ಕೆ ಪ್ರಬಲ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಉತ್ತರ ಕನ್ನಡ ‘ಗುಡ್ಡಗಾಡು ಜಿಲ್ಲೆ’ ಘೋಷಣೆ ಮೂಲಕ ಸಾಮಾಜಿಕ, ಶೈಕ್ಷಣಿಕ ಮತ್ತು ಸರ್ವಾಗೀಕರಣ ಅಭಿವೃದ್ದಿ ಸಾಧ್ಯ’ ಎಂದು ಅಲ್ಲಿ ನೆರೆದಿದ್ದವರಿಗೆ ಮನವರಿಕೆ ಮಾಡಿದರು.
`ಶೇ 80ರಷ್ಟು ಅರಣ್ಯ ಮತ್ತು ಶೇ 10ರಷ್ಟು ಗುಡ್ಡಗಾಡು, ತಗ್ಗು, ಬೆಟ್ಟ, ಜಲಪಾತ, ಸಹ್ಯಾದ್ರಿ ಪರ್ವತದಿಂದ ಕೂಡಿರುವ ಉತ್ತರ ಕನ್ನಡ ಗುಡ್ಡಗಾಡು ಪ್ರದೇಶವಾಗಿದೆ. ಜಿಲ್ಲೆಯ ಜನರ ಸಂಖ್ಯೆಯಲ್ಲಿ ಶೇ 40ರಷ್ಟು ಅರಣ್ಯವಾಸಿಗಳಿದ್ದು, ಜನ ಜೀವನ, ಸಂಸ್ಕೃತಿ, ಆಹಾರ, ಪರಿಸರಗಳು ನೈಸರ್ಗಿಕವಾಗಿ ಗುಡ್ಡಗಾಡು ಜಿಲ್ಲೆ ಘೋಷಣೆಗೆ ಪೂರಕವಾಗಿದೆ’ ಎಂದರು.
ಸಹಾಯಕ ಆಯುಕ್ತರಾದ ಕೆ.ವಿ ಕಾವ್ಯರಾಣಿ, ತಹಶೀಲ್ದಾರ ಶಂಕರ ಗೌಡಿ, ಪ್ರಮುಖರಾದ ಸರೋಜಾ ಚವ್ಹಾಣ, ಡೀನಾ ಝೇವಿಯರ್, ಜುಲಿಯಾನ ಸಿದ್ಧಿ, ಅನಿತ ಡಿಸೋಜಾ, ಸುಭಾಷ ವಡ್ಡರ್, ಅನಿಲ್ ಡಿಸೋಜಾ ಇತರರು ರವೀಂದ್ರ ನಾಯ್ಕರ ಮಾತು ಕೇಳಿ ತಲೆಯಾಡಿಸಿದರು.




