ಯಲ್ಲಾಪುರ: ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡುತ್ತಿರುವ ಪೊಲೀಸರು ಅಲ್ಲಿರುವ ಮಕ್ಕಳ ಮನಗೆಲ್ಲುವ ಪ್ರಯತ್ನ ನಡೆಸಿದ್ದಾರೆ. ಇದರೊಂದಿಗೆ ಮಕ್ಕಳಲ್ಲಿ ಕಾನೂನು ಅರಿವು ಮೂಡಿಸುವ ಪ್ರಯತ್ನ ಮುಂದುವರೆಸಿದ್ದಾರೆ.
ಯಲ್ಲಾಪುರ ತಾಲೂಕಿನ ಕುಂದರಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೋಮವಾರ ಪೊಲೀಸರು ಭೇಟಿ ನೀಡಿ ವಿವಿಧ ವಿಷಯಗಳ ಬಗ್ಗೆ ಪಾಠ ಮಾಡಿದರು. ಅಪರಾಧ ತಡೆ ಮಾಸಾಚರಣೆ ಕುರಿತು ಶಿಕ್ಷಕರಿಗೆ ಮೊದಲು ಅರಿವು ಮೂಡಿಸಿದರು. ಅದಾದ ನಂತರ ರಸ್ತೆ ಸುರಕ್ಷತಾ ನಿಯಮ, ಪೊಕ್ಸೋ ಕಾಯ್ದೆ, ಮಾದಕ ದ್ರವ್ಯ ವ್ಯಸನಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ತುರ್ತು ಸನ್ನಿವೇಶದಲ್ಲಿ 112 ಸಹಾಯವಾಣಿಗೆ ಕರೆ ಮಾಡುವ ವಿಧಾನದ ಬಗ್ಗೆ ತಿಳಿಸಿದರು. ಮಂಚಿಕೇರಿ ಪೊಲೀಸ್ ಹೊರ ಠಾಣೆಯ ಹವಾಲ್ದಾರರಾದ ದೀಪಕ ನಾಯ್ಕ ಹಾಗೂ ಪೊಲೀಸ್ ಸಿಬ್ಬಂದಿ ಪರಶುರಾಮ ದೊಡ್ಡಮನಿ ಮಕ್ಕಳ ಜೊತೆ ಬೆರೆತರು. `ಅಪರಿಚಿತರು ನೀಡುವ ಸಿಹಿತಿಂಡಿ ಸ್ವೀಕರಿಸಬಾರದು. ಅನುಮಾನಾಸ್ಪದ ವ್ಯಕ್ತಿಗಳು ಕಾಣಿಸಿದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ಹೆಣ್ಣು ಮಕ್ಕಳ ರಕ್ಷಣೆಗಾಗಿ ಮಹಿಳಾ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿನಿಯರು ತಮ್ಮ ಸಮಸ್ಯೆಗಳನ್ನು ಅವರ ಬಳಿ ಮುಕ್ತವಾಗಿ ಹೇಳಿಕೊಳ್ಳಬಹುದು’ ಎಂದು ಪೊಲೀಸರು ಹೇಳಿದರು.
ಶಾಲೆಯ ಪ್ರಾಧ್ಯಾಪಕ ವಿನಾಯಕ ಭಟ್, ಮುರಳಿಧರ ಶಿರಸಾಟ, ಪೂರ್ಣಿಮಾ ನಾಯ್ಕ, ಭವ್ಯ ಇತರರು ಇದ್ದರು.




