ಶಿರಸಿ: ಸಾರ್ವಜನಿಕರ ಒತ್ತಾಯದ ಮೇರೆಗೆ ಕಳೆದ ವರ್ಷ ಹೊಸಪೇಟೆಯಿಂದ ಎಪಿಎಂಸಿ ಮಹಾದ್ವಾರದವರೆಗೆ ಹೊಸದಾಗಿ ರಸ್ತೆ ನಿರ್ಮಿಸಲಾಗಿದೆ. ಆದರೆ, ಇದೀಗ ಅದೇ ರಸ್ತೆಯನ್ನು ಅಗೆದು ನೀರಿನ ಪೈಪ್ ಅಳವಡಿಸಲಾಗುತ್ತಿದೆ!
ಎಪಿಎಂಸಿ ಸೇರಿದಂತೆ ಟಿಎಸ್ಎಸ್, ಕೆಡಿಸಿಸಿ ಬ್ಯಾಂಕ್, ವಿಜಯ ಬ್ಯಾಂಕ್, ಟಿಆರ್ಸಿ ಬ್ಯಾಂಕ್, ಅಡಿಕೆ ಮಂಡಿ, ಮುಖ್ಯ ಅಂಚೆ ಕಚೇರಿ ಸೇರಿ ಹಲವು ವಹಿವಾಟು ಕ್ಷೇತ್ರಗಳು ಈ ರಸ್ತೆಗೆ ಹೊಂದಿಕೊAಡಿದೆ. ನಿತ್ಯ ಸಾವಿರಾರು ಜನ ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಹೀಗಾಗಿ ಕಳೆದ ವರ್ಷ ಕಿರಿದಾಗಿದ್ದ ರಸ್ತೆಯ ಅಗಲೀಕರಣವೂ ನಡೆದಿದೆ. ಇದಕ್ಕಾಗಿ ಅನೇಕರು ತಮ್ಮ ಭೂಮಿಯನ್ನು ರಸ್ತೆ ಅಭಿವೃದ್ಧಿಗೆ ಬಿಟ್ಟಿದ್ದಾರೆ. ಆದರೆ, ಆ ವೇಳೆ ಕುಡಿಯುವ ನೀರಿನ ಪೈಪ್ ಅಳವಡಿಸುವ ಚಿಂತನೆ ನಗರಸಭೆಗೆ ಇರಲಿಲ್ಲ!
ಅಚ್ಚುಕಟ್ಟಾಗಿ ನಿರ್ಮಾಣವಾದ ರಸ್ತೆಯನ್ನು ಇದೀಗ ಕುಡಿಯುವ ನೀರಿನ ಪೈಪ್ ಅಳವಡಿಕೆ ನೆಪದಲ್ಲಿ ಅಗೆಯಲಾಗುತ್ತಿದೆ. ಎಲ್ಲೆಂದರಲ್ಲಿ ರಸ್ತೆ ಅಗೆಯುತ್ತಿರುವುದರಿಂದ ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. `ಮುಂದಾಲೋಚನೆ ಇಲ್ಲದೇ ಯೋಜನೆ ಅನುಷ್ಠಾನ ಮಾಡಿದ್ದರಿಂದ ಜನರ ತೆರಿಗೆ ಹಣವೂ ಹಾಳು, ರಸ್ತೆಯೂ ಹಾಳು’ ಎಂದು ಆ ಭಾಗದವರು ದೂರಿದ್ದಾರೆ. ಪೂರ್ವಾಪರ ಯೋಜನೆಗಳಿಲ್ಲದೇ ಹಣ ವೆಚ್ಚ ಮಾಡುವ ನಗರಸಭೆ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ.
ಇನ್ನೂ ರಸ್ತೆಯ ಎಲ್ಲೆಂದರಲ್ಲಿ ಹೊಂಡ ಮಾಡಿರುವುದರಿಂದ ಅಪಘಾತಗಳು ನಡೆಯುತ್ತಿದೆ. ಓಡಾಡುವವರ ಮೂಗಿಗೆ ಧೂಳು ಬಡಿಯುವುದು ಸಾಮಾನ್ಯವಾಗಿದೆ. ಪ್ರಸ್ತುತ ಅಲ್ಲಲ್ಲಿ ರಸ್ತೆ ಮೇಲೆ ಗುಂಡಿ ನಿರ್ಮಿಸಿರುವುದರಿಂದ ಮೊದಲಿನ ರಸ್ತೆಯೂ ಕಿರಿದಾಗಿದ್ದು, ಜನರ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.




