ಯಲ್ಲಾಪುರ: ನಂದೂಳ್ಳಿಯಲ್ಲಿ ಗ್ರಾಮ ಒನ್ ಸೇವಾ ಕೇಂದ್ರ ನಡೆಸುತ್ತಿರುವ ಸುರೇಶ ಸಿದ್ದಿ ಅವರ ಸೇವೆ ಪರಿಗಣಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಅವರನ್ನು ಸನ್ಮಾನಿಸಿದೆ. ನಂದೂಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸುರೇಶ ಸಿದ್ದಿ ಅವರಿಗೆ ಶಾಲು ಹೊದೆಸಿ ಗೌರವಿಸಲಾಯಿತು.
ಕಳೆದ ಮೂರು ವರ್ಷಗಳಿಂದ ಸುರೇಶ ಸಿದ್ದಿ ಅವರು ನಂದೂಳ್ಳಿಯಲ್ಲಿ ಗ್ರಾಮ ಒನ್ ಸೇವಾ ಕೇಂದ್ರ ನಡೆಸುತ್ತಿದ್ದಾರೆ. ಸರ್ಕಾರಿ ಸೇವೆಯನ್ನು ಜನರಿಗೆ ತಲುಪಿಸುವಲ್ಲಿ ಅವರು ಶ್ರಮಿಸುತ್ತಿದ್ದು, ಶಾಲಾ ಮಕ್ಕಳ ದಾಖಲಾತಿ ಕೆಲಸವನ್ನು ಸಹ ಮಾಡಿಕೊಟ್ಟಿದ್ದಾರೆ. ನಂದೂಳ್ಳಿ ಪ್ರೌಢಶಾಲೆಯ ಮಾಜಿ ವಿದ್ಯಾರ್ಥಿಯೂ ಆಗಿರುವ ಕಾರಣ ಶಾಲಾ ಆಡಳಿತ ಮಂಡಳಿಯವರು ಅವರನ್ನು ಗೌರವಿಸಿದರು.
ಗುರುವಾರ ಶಾಲಾ ಆವರಣದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಹೈಸ್ಕೂಲಿನ ಎಸ್ಡಿಎಂಸಿ ಅಧ್ಯಕ್ಷರು ಬಾಲಚಂದ್ರ ಭಟ್ಟ, ಮುಖ್ಯ ಶಿಕ್ಷಕಿ ಗೀತಾ ಹೆಗಡೆ, ಸಹ ಶಿಕ್ಷಕರಾದ ನಿತೀಶ ತೊರ್ಕೆ, ವಿ ಎಸ್ ಭಟ್ಟ, ಸೊಸೈಟಿ ಸಂಘದ ಅಧ್ಯಕ್ಷ ತಿಮ್ಮಣ್ಣ ಭಾಗ್ವತ, ಎಲ್ಎಸ್ಎಂಪಿ ಸೊಸೈಟಿ ನಿರ್ದೇಶಕ ಎಂ ಎನ್ ಭಟ್ಟ ಸೇರಿ ಸುರೇಶ ಸಿದ್ದಿ ಅವರನ್ನು ಸನ್ಮಾನಿಸಿದರು.





