ಯಲ್ಲಾಪುರ: `ಕಲ್ಮಠದಲ್ಲಿ ನಿವೇಶನ ಪಡೆದ ಕೆಲವರು ಸಾರ್ವಜನಿಕ ಹಳ್ಳ ಅತಿಕ್ರಮಿಸಿಕೊಳ್ಳುತ್ತಿದ್ದು ಇದಕ್ಕೆ ತಡೆವೊಡ್ಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಧೀರಜ್ ತಿನ್ನೇಕರ್ ಜಿಲ್ಲಾಡಳಿತಕ್ಕೆ ಪತ್ರ ರವಾನಿಸಿದ್ದಾರೆ.
`ಶಿಸ್ತುಮುಡಿಯಿಂದ ಶುರುವಾದ ಹಳ್ಳ ಕಲ್ಮಠದ ಮೂಲಕ ಬೇರೆ ಬೇರೆ ಊರುಗಳನ್ನು ಸುತ್ತುವರೆದು ಮುಂದೆ ತಣ್ಣೀರ ಹಳ್ಳವನ್ನು ಕೂಡುತ್ತದೆ. ಆದರೆ, ಇಲ್ಲಿ ಭೂ ಪರಿವರ್ತನೆಯ ನಿವೇಶನ ಪಡೆದವರು ಹಂತ ಹಂತವಾಗಿ ಹಳ್ಳವನ್ನು ಅತಿಕ್ರಮಿಸಿಕೊಂಡಿದ್ದು, ಮಳೆಗಾಲದ ಅವಧಿಯಲ್ಲಿ ನೀರು ಹರಿಯುವಿಕೆಗೂ ಸೂಕ್ತ ಜಾಗವಿಲ್ಲ. ಇದರಿಂದ ಅಕ್ಕ-ಪಕ್ಕದ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ’ ಎಂದವರು ವಿವರಿಸಿದ್ದಾರೆ.
`ಕಲ್ಮಠದ ಸರ್ವೇ ನಂ 21 ಹಾಗೂ 22ರಲ್ಲಿ ಭೂಮಿ ಪಡೆದವರು ಮನೆ, ಕಪೌಂಡ್ ನಿರ್ಮಿಸುತ್ತಿದ್ದು ತಮ್ಮ ಅನುಕೂಲಕ್ಕೆ ತಕ್ಕಂತೆ ಹಳ್ಳವನ್ನು ಮುಚ್ಚಿದ್ದಾರೆ. ಈ ಬಗ್ಗೆ ಗೌರವ್ವ ಹಿರೇಮಠ, ಶಿವಯ್ಯ ಹಿರೇಮಠ, ಮುಲ್ಲಾ ರಫಿಕ್, ಹಸನ ಕಾನಳ್ಳಿ, ಮುಮುದಿ ಶೇಖ್, ಸಾವಿತ್ರಿ ಹೀರೆಮಠ, ಅನುಸೂಯಾ ಹಿರೇಮಠ, ನಂದೀಶ ಹಿರೇಮಠ, ಕೃಷ್ಣಾನಂದ ಪೈ, ಶಿವು ಕವಳಿ ಎಂಬ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಹಳ್ಳದ ನೀರು ಸರಾಗವಾಗಿ ಹರಿಯದೇ ಕೃಷಿ ಭೂಮಿಗೆ ನುಗ್ಗುವುದರಿಂದ ಬೆಳೆ ಬೆಳೆಯಲು ಸಮಸ್ಯೆಯಾಗಿದೆ’ ಎಂದವರು ಹೇಳಿದ್ದಾರೆ.
`ಅತಿಕ್ರಮಿಸಿದ ಜಾಗವನ್ನು ಖುಲ್ಲಾಪಡಿಸಿ ಮೊದಲಿನಂತೆ ಹಳ್ಳ ಸರಾಗವಾಗಿ ಹೋಗಲು ದಾರಿ ಮಾಡಿಕೊಡಬೇಕು. ಒಂದು ವಾರದ ಒಳಗೆ ಕ್ರಮ ಆಗದೇ ಇದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸಲಾಗುತ್ತದೆ’ ಎಂದವರು ಎಚ್ಚರಿಸಿದ್ದಾರೆ. ಮಳೆಗಾಲದ ಫೋಟೋಗಳ ಜೊತೆ ತಹಶೀಲ್ದಾರ್ ಕಚೇರಿ ಮೂಲಕ ಜಿಲ್ಲಾಡಳಿತಕ್ಕೆ ಈ ಪತ್ರ ರವಾನಿಸಿದ್ದಾರೆ.




