ಅಂಕೋಲಾ: ರಾತ್ರಿ 12 ಗಂಟೆ ನಂತರ ಕೋಟೆವಾಡದ ಸ್ಮಶಾನದಿಂದ ಅಳವ ಸದ್ದು ಕೇಳಿ ಬರುತ್ತಿದ್ದು, ಅವರ್ಸಾದ ಮಹಿಳೆಯೊಬ್ಬರು `ಇದು ನನ್ನ ಗಂಡನ ಧ್ವನಿ’ ಎಂದು ದೃಢೀಕರಿಸಿದ್ದರು. ಆದರೆ, ಯಾರಿಗೂ ಆ ವೇಳೆ ಸಮಾಧಿ ಬಳಿ ಹೋಗುವ ಧೈರ್ಯವಾಗಿರಲಿಲ್ಲ. ಕೊನೆಗೂ ಪೊಲೀಸರು ಸ್ಮಶಾನ ಪ್ರವೇಶಿಸಿ ಆ ಧ್ವನಿ ರಹಸ್ಯವನ್ನು ಬಯಲಿಗೆಳೆದರು!
ಅವರ್ಸಾದ ಮಹಿಳೆಯೊಬ್ಬರು ತಮ್ಮ ಪತಿಯೊಂದಿಗೆ ಕೋಟೆವಾಡದಲ್ಲಿ ವಾಸವಾಗಿದ್ದರು. ಅಪಘಾತದಲ್ಲಿ ಆ ಮಹಿಳೆಯ ಪತಿ ಸಾವನಪ್ಪಿದ್ದು, ಕೋಟೆವಾಡದ ಕ್ರಿಶ್ಚಿಯನ್ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆದಿತ್ತು. ಹೀಗಾಗಿ `ಮಗುವನ್ನು ನೆನೆದು ಪತಿ ಅಳುತ್ತಿದ್ದಾರೆ’ ಎಂದು ಆ ಮಹಿಳೆ ಎಲ್ಲಾ ಕಡೆ ಹೇಳಿಕೊಂಡಿದ್ದರು. ಕೆಲವರಿಗೆ ಮಧ್ಯಾಹ್ನದ ವೇಳೆ ಸಹ ಅಳವು ಸದ್ದು ಕೇಳುತ್ತಿದ್ದು, ಅಳುವಿನ ರಹಸ್ಯ ಹುಡುಕಿ ಹೋದವರು ಯಾರು ಇರಲಿಲ್ಲ. ಹೀಗಾಗಿ ಅಳುವ ಸದ್ದು ಕೇಳಿದಾಗಲೆಲ್ಲ ಅನೇಕರು ಬೆಚ್ಚಿ ಬೀಳುತ್ತಿದ್ದರು.
ಭಾನುವಾರ ರಾತ್ರಿ ಅಂಕೋಲಾ ಉತ್ಸವ ಮುಗಿಸಿ ಮನೆಗೆ ಮರಳುತ್ತಿದ್ದವರಿಗೂ ಸ್ಮಶಾನದೊಳಗಿನ ಸದ್ದು ಕೇಳಿತು. ಪುರುಷ ಧ್ವನಿಯೊಂದು ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ಖಚಿತಪಡಿಸಿಕೊಂಡ ಜನ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಮಶಾನಕ್ಕೆ ಹಾಕಿದ್ದ ಬೀಗ ತೆರವಾಗಿರುವುದು ಹಾಗೂ ಸ್ಮಶಾನದ ಅಂಚಿನಲ್ಲಿ ಬೈಕು ಅನಾಥ ಸ್ಥಿತಿಯಲ್ಲಿರುವ ವಿಷಯವನ್ನು ಮುಟ್ಟಿಸಿದರು. ಆದರೆ, ಸ್ಮಶಾನದ ಒಳಗೆ ಪ್ರವೇಶಿಸಲು ಅಲ್ಲಿನವರು ಸಹ ಧೈರ್ಯ ಮಾಡಲಿಲ್ಲ.
ಪೊಲೀಸರು ಸ್ಮಶಾನದ ಬಳಿ ಬಂದರು. ಆಗ, ಅವರ ಜೊತೆ ಒಂದಿಬ್ಬರು ಒಳಗೆ ಹೋದರು. ಕತ್ತಲೆಯಲ್ಲಿ ಬ್ಯಾಟ್ರಿ ಹೊಡೆದು ನೋಡಿದಾಗ ಅಲ್ಲಿನ ಸಮಾಧಿ ಮೇಲೆ ವ್ಯಕ್ತಿ ಕುಳಿತು ಮಾತನಾಡುತ್ತಿದ್ದ. ಸ್ಮಶಾನದ ಅಂಚಿನಲ್ಲಿದ್ದ ಬೈಕು ಸತೀಶ ನಾಯ್ಕರ ಹೆಸರು ತೋರಿಸುತ್ತಿತ್ತು. ಪೊಲೀಸರು ಆತನನ್ನು ವಿಚಾರಿಸಿದಾಗ `ನಾನೇರ ಹೊಸಗದ್ದೆಯ ಹರೀಶ ಗೌಡ’ ಎಂದಿದ್ದ. ಜೊತೆಗೆ `ಸಾವನಪ್ಪಿದ ನನ್ನ ಸ್ನೇಹಿತನ ಬಳಿ ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದೇನೆ’ ಎಂದು ಆತ ಪೊಲೀಸರಿಗೆ ತಿಳಿಸಿದ್ದ.
`ಮತ್ತೊಮ್ಮೆ ಇಲ್ಲಿ ಕಾಣಿಸಿಕೊಂಡರೆ ಹುಷಾರು’ ಎಂದು ಪೊಲೀಸರು ಲಾಠಿ ತೋರಿಸಿದ ನಂತರ ಆತ `ತಪ್ಪಾಯ್ತು ಬುದ್ದಿ’ ಎನ್ನುತ್ತ ಸಮಾಧಿ ಮೇಲಿಂದ ಎದ್ದು ಸ್ಮಶಾನದಿಂದ ಹೊರ ಹೋದ. ಇನ್ನೂ `ಆ ಧ್ವನಿ ತನ್ನ ಗಂಡನದು’ ಎಂದು ಕನವರಿಸುತ್ತಿದ್ದ ಮಹಿಳೆ ಸಹ ನಿರಾಳರಾದರು!





