ಜಾನುವಾರುಗಳ ಮೇವಿಗಾಗಿ ಹುಲ್ಲು ತುಂಬಿಕೊoಡು ಹೊರಟಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಪರಿಣಾಮ ಹುಲ್ಲಿನ ಜೊತೆ ಲಾರಿಯೂ ಭಸ್ಮವಾಗಿದೆ.
ಸಿದ್ದಾಪುರ ತಾಲೂಕಿನ ಕುಮಟಾ ಮುಖ್ಯ ರಸ್ತೆಯಲ್ಲಿ ಶನಿವಾರ ಹುಲ್ಲು ತುಂಬಿದ ಲಾರಿ ಚಲಿಸುತ್ತಿತ್ತು. ಸಿದ್ದಾಪುರ ಕಡೆಯಿಂದ ದೊಡ್ಮನೆ ಕಡೆಗೆ ಸಾಗುತ್ತಿದ್ದಾಗ ಕುಂಬ್ರಿಗದ್ದೆ ಬಸ್ ನಿಲ್ದಾಣದ ಬಳಿ ಲಾರಿ ಬೆಂಕಿಗೆ ಆಹುತಿಯಾಯಿತು. ಈ ವೇಳೆ . ಲಾರಿ ಚಾಲಕ ವಾಹನದಿಂದ ಇಳಿದು ಜೀವ ಉಳಿಸಿಕೊಂಡರು.
ಬೀರಲಮಕ್ಕಿ ಬಳಿಯ ಉಡಳ್ಳಿಯ ಮಂಜುನಾಥ ಅವರಿಗೆ ಸೇರಿದ ಹುಲ್ಲಿನ ಲಾರಿ ಇದಾಗಿದ್ದು, ಅಗ್ನಿ ಅವಘಡಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ಅದಾಗಿಯೂ ಹುಲ್ಲು ತುಂಬಿದ ಲಾರಿಗೆ ವಿದ್ಯುತ್ ತಂತಿ ಸ್ಪರ್ಶಿಸಿದ್ದರಿಂದ ಅಗ್ನಿ ದುರಂತ ನಡೆದ ಅನುಮಾನಗಳಿವೆ.
ಸ್ಥಳೀಯರು ಅಗ್ನಿಶಾಮಕದಳಕ್ಕೆ ಫೋನ್ ಮಾಡಿ ವಿಷಯ ಮುಟ್ಟಿಸಿದರು. ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸುವ ಪ್ರಯತ್ನ ಮಾಡಿದರು. ಊರಿನವರು ಸಹ ನೀರು ತಂದು ಬೆಂಕಿ ಆರಿಸಿದರು. ಅಗ್ನಿಶಾಮಕ ವಾಹನದ ನೀರು ಖಾಲಿಯಾದರೂ ಬೆಂಕಿ ಆರಲಿಲ್ಲ.
ಆಗ, ಸ್ಥಳೀಯ ಮನೆಯಲ್ಲಿನ ಬಾವಿ ನೀರು ಉಪಯೋಗಿಸಿ ಬೆಂಕಿ ಆರಿಸಲಾಯಿತು. ಲಾರಿ ಹೊತ್ತಿ ಉರಿದಿದ್ದರಿಂದ ತಾಸುಗಳ ಕಾಲ ಕುಮಟಾ-ಸಿದ್ದಾಪುರ ಮುಖ್ಯ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.




