ಕುಮಟಾದಲ್ಲಿ ಕಾಯಿಪಲ್ಯೆ ವ್ಯಾಪಾರ ಮಾಡುವುದನ್ನು ಬಿಟ್ಟು ಮಟ್ಕಾ ಆಡಿಸುತ್ತಿದ್ದ ಪ್ರದೀಪ ಪಟಗಾರ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಹೊನ್ನಾವರದಲ್ಲಿ ಕೆಲಸ-ಕಾರ್ಯ ಬಿಟ್ಟು ಇಸ್ಪಿಟ್ ಆಡುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುಮಟಾ ಹಂದಿಗೋಣದ ಕಾಯಿಪಲ್ಯೆ ವ್ಯಾಪಾರಿ ಪ್ರದೀಪ ಪಟಗಾರ ಹಂದಿಗೋಣ ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುತ್ತಿದ್ದರು. ಫೆ 8ರಂದು ಅವರು 1 ರೂಪಾಯಿಗೆ 80 ರೂ ಕೊಡುವುದಾಗಿ ಹೇಳಿ ಜನರಿಂದ ಹಣ ಸಂಗ್ರಹಿಸುತ್ತಿದ್ದಾಗ ಪಿಎಸ್ಐ ಸಾವಿತ್ರಿ ನಾಯಕ ದಾಳಿ ಮಾಡಿದರು. ಆಗ ಅವರ ಬಳಿ 1240ರೂ ಹಣ ಸಿಕ್ಕಿತು.
ಇದೇ ದಿನ ಹೊನ್ನಾವರದ ಸಿಂದನೂರಿನ ಸುಬ್ರಾಯ ಗೌಡ, ಮುಗ್ವಾದ ಶ್ರೀನಾಥ ಗೌಡ ಹಾಗೂ ರಾಘು ಗೌಡ ಸೇರಿ ಮಂಜಿ ಗಂಜಿಗೇರಿಯ ಬಳಿ ಅಂದರ್ ಬಾಹರ್ ಆಡುತ್ತಿದ್ದರು. ಸಂಪೋಳ್ಳಿ ಹೋಗುವ ರಸ್ತೆ ಅಂಚಿನಲ್ಲಿ ಕೂತಿದ್ದ ಅವರ ಮೇಲೆ ಪಿಎಸ್ಐ ಶ್ರೀಕಾಂತ ರಾಥೋಡ್ ದಾಳಿ ಮಾಡಿದರು. ಇಸ್ಪಿಟ್ ಎಲೆಗಳ ಜೊತೆ ಅಲ್ಲಿ ಹರಡಿಕೊಂಡಿದ್ದ 5620ರೂ ಹಣವನ್ನು ವಶಕ್ಕೆ ಪಡೆದರು.
ಈ ಎರಡು ಕಡೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.





