ಪಂಡ್ರಾಪುರ ಜಾತ್ರೆಗೆ ಹೋಗಿದ್ದ 30ಕ್ಕೂ ಅಧಿಕ ಜನ ಅಸ್ವಸ್ಥರಾಗಿದ್ದಾರೆ. ಕೆಲವರು ಜಾತ್ರೆಗೆ ಹೋದಾಗಲೇ ಅಸ್ವಸ್ಥರಾಗಿ ಅಲ್ಲಿಯೇ ಚಿಕಿತ್ಸೆ ಪಡೆದಿದ್ದು, ಇನ್ನು ಕೆಲವರು ಊರಿಗೆ ಮರಳಿದ ನಂತರ ವಾಂತಿ-ಬೇದಿಯಿoದ ತತ್ತರಿಸಿದ್ದಾರೆ.
ಯಲ್ಲಾಪುರ ತಾಲೂಕಿನ ಕುಂದರ್ಗಿ ಪಂಚಾಯತ ವ್ಯಾಪ್ತಿಯ ರಾಜೀವಾಡ ಹಾಗೂ ಮಜ್ಜಿಗೆಹಳ್ಳದ ಅನೇಕರು ಫೆ 4ರಂದು ಪಾಂಡ್ರಾಪುರ ಜಾತ್ರೆಗೆ ಹೋಗಿದ್ದರು. ಅಲ್ಲಿ ಅವರೆಲ್ಲರೂ ವಸತಿ ಹೂಡಿದ್ದರು. ಈ ವೇಳೆ ಆರೋಗ್ಯ ಸಮಸ್ಯೆ ಕಾಣಿಸಿದ ಹಿನ್ನಲೆ 10 ಜನ ಅಲ್ಲಿ ಚಿಕಿತ್ಸೆ ಪಡೆದರು. ಉಳಿದವರು ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷಿಸಿ ಫೆ 10ರಂದು ಊರಿಗೆ ಮರಳಿದರು.
ಆದರೆ, ಫೆ 12ರಂದು ಅವರಲ್ಲಿ ಅನೇಕರಿಗೆ ಆರೋಗ್ಯ ಸಮಸ್ಯೆ ಉಲ್ಬಣಿಸಿತು. ಈ ಪೈಕಿ ಇಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾದರು. 28 ಜನ ವಾಂತಿ-ಬೇದಿಯಿoದ ತತ್ತರಿಸಿದ್ದು, ಈ ವಿಷಯ ಅರಿತ ಕುಂದರಗಿ ಪ್ರಾಥಮಿಕ ವೈದ್ಯಾಧಿಕಾರಿಗಳ ತಂಡ ಕ್ಷೇತ್ರ ಭೇಟಿ ಮಾಡಿತು. ಜಿಲ್ಲಾ ಆರೋಗ್ಯಾಧಿಕಾರಿ ಡಾ ನೀರಜ್ ಅವರು ತಕ್ಷಣ ಸ್ಥಳಕ್ಕೆ ಬಂದರು. ತಾಲೂಕಾ ಆರೋಗ್ಯಾಧಿಕಾರಿ ಡಾ ನರೇಂದ್ರ ಪವಾರ್ ಹಾಗೂ ವೈದ್ಯಕೀಯ ಸಿಬ್ಬಂದಿ ಅಲ್ಲಿದ್ದ 28 ರೋಗಿಗಳಿಗೆ ಚಿಕಿತ್ಸೆ ನೀಡಿದರು.
ಗಂಭೀರ ಸಮಸ್ಯೆ ಅನುಭವಿಸುತ್ತಿದ್ದ 12 ರೋಗಿಗಳನ್ನು ಉನ್ನತ ದರ್ಜೆಯ ಆಸ್ಪತ್ರೆಗೆ ಕಳುಹಿಸಲಾಗಿದ್ದು, ನಾಲ್ಕು ಸಮುದಾಯ ಆರೋಗ್ಯಾಧಿಕಾರಿಗಳ ಜೊತೆ ಅಗತ್ಯವಿರುವ ಆಂಬುಲೆನ್ಸಗಳು ಸಹ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿವೆ. ವೈದ್ಯರು ನೀಡಿದ ಸಲಹೆಗಳನ್ನು ಗಂಭಿರವಾಗಿ ಪರಿಗಣಿಸಿ, ಆರೋಗ್ಯ ಸುದಾರಿಸಿಕೊಳ್ಳುವಂತೆ ವೈದ್ಯಕೀಯ ತಂಡ ಸಲಹೆ ನೀಡಿದೆ.




