ಅಗ್ನಿ ಅವಘಡದಿಂದ ಮನೆ ಸುಟ್ಟುಕೊಂಡಿದ್ದ ಕುಟುಂಬದವರಿಗೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಆರ್ಥಿಕ ನೆರವು ನೀಡಿದ್ದಾರೆ.
ಶಿರಸಿ ತಾಲೂಕಿನ ಗೋಳಿಯ ಮಂಜಪ್ಪನಮುರ್ಕಿಯಲ್ಲಿ ಮಹಾದೇವಿ ಸುಧಾರಕ ಮಡಿವಾಳ ಅವರ ಮನೆ ಬುಧವಾರ ಸುಟ್ಟು ಕರಕಲಾಗಿತ್ತು. ಈ ವಿಷಯ ಅರಿತ ಅನಂತಮೂರ್ತಿ ಹೆಗಡೆ ಅಲ್ಲಿಗೆ ಭೇಟಿ ನೀಡಿ ನೆರವು ನೀಡಿದರು.
`ಮನೆಯಲ್ಲಿ ಇದ್ದ ಟಿವಿ, ಫ್ರಿಜ್ ಬಟ್ಟೆ ಎಲ್ಲವೂ ಸಂಪೂರ್ಣ ಸುಟ್ಟು ಹೋಗಿದೆ. ಮಹಾದೇವಿ ಮಡಿವಾಳ ಅವರ ಮಗ ನಾಗರಾಜ ಮದುವೆಗೆ ಕೂಡಿ ಇಟ್ಟಿದ್ದ 1.5 ಲಕ್ಷ ರೂಪಾಯಿ ಹಣ ಹಾಗೂ ಬಂಗಾರ ಕೂಡ ಸುಟ್ಟಿದೆ’ ಎಂದು ಮನೆಯವರು ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಜ್ಯೋತಿ ಸುಬ್ರಾಯ ಹೆಗಡೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.




