ಶಿರಸಿ ಖಾಜಿಗಲ್ಲಿಯ ಜಹೀರ್ ಶೇಖ್ ಹಾಗೂ ಕರೆಗುಂಡೆಯ ಅನೀಶಗೌಸ್ ತಹಶೀಲ್ದಾರ್ ಮತ್ತೆ ಜಗಳ ಮಾಡಿಕೊಂಡಿದ್ದಾರೆ. ಅವರ ಜಗಳ ಬಗೆಹರಿಸಲಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.
ಜಹೀರ್ ಶೇಖ್ ಹಾಗೂ ಅನೀಶಗೌಸ್ ತಹಶೀಲ್ದಾರ್ ಜಗಳ ಇದೇ ಮೊದಲಲ್ಲ. ಎರಡು ತಿಂಗಳ ಹಿಂದೆ ಸಹ ಅವರಿಬ್ಬರು ಕಿತ್ತಾಟ ನಡೆಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಆಗ, ಪೊಲೀಸರು ಮುಚ್ಚಳಿಕೆ ಬರೆಯಿಸಿಕೊಂಡು ಬುದ್ದಿ ಹೇಳಿ ಕಳುಹಿಸಿದ್ದರು. ಆದರೆ, ಈ ಬಾರಿ ಮತ್ತೆ ಅವರ ಜಗಳ ವಿಕೋಪಕ್ಕೆ ಹೋಗಿ ಕೊಲೆ ಬೆದರಿಕೆ ಒಡ್ಡುವವರೆಗೆ ಬಂದಿದೆ. ಈ ಹಿನ್ನಲೆ ಪೊಲೀಸರು ಇಬ್ಬರಿಂದಲೂ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಖಾಜಿಗಲ್ಲಿಯ ಜಹೀರ ಶೇಖ್ ಫೆ 13ರಂದು ತಮ್ಮ ವ್ಯಾಪಾರಕ್ಕಾಗಿ ಬೈಕ್ ಮೇಲೆ ಹೋಗುತ್ತಿದ್ದರು. ಕಸ್ತೂರಿಬಾ ನಗರದ ಕಡೆ ಅವರು ಹೊರಟಿರುವಾಗ ಕೆರೆಗುಂಡಿ ಬಳಿ ಅನೀಶಗೌಸ್ ತಹಶೀಲ್ದಾರ್ ಎದುರಾದರು. ಫೆ 12ರಂದು ಆರಿಪ್ ದವಾಲ್ ಸಾಬ್ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ ವಿಷಯವಾಗಿ ಅವರಿಬ್ಬರ ನಡುವೆ ವಾಗ್ವಾದ ನಡೆಯಿತು.
`ನೀನು ಯಾರಿಗೆ ಕಂಪ್ಲೆಟ್ ಮಾಡಿದರೂ ನಾನು ಹೆದರುವುದಿಲ್ಲ. ಕೈ ಕಾಲು ಮುರಿದು ಜೀವ ತೆಗೆಯುವೆ’ ಎಂದು ಅನೀಶಗೌಸ್ ತಹಶೀಲ್ದಾರ್ ಬೆದರಿಸಿದರು. `ಇನ್ನು ಯಾವುದೇ ಮಸೀದಿ ವಿಷಯಕ್ಕೆ ಬಂದರೂ ನಾನು ಸುಮ್ಮನಿರುವುದಿಲ್ಲ. ನಿನ್ನ ವಿರುದ್ಧ ಸುಳ್ಳು ದೂರು ದಾಖಲಿಸಿ, ಜೀವಕ್ಕೆ ತೊಂದರೆ ಮಾಡುವೆ’ ಎಂದು ಜಹೀರ್ ಶೇಖ್ ಹೇಳಿದರು. ಕೊನೆಗೆ ಈ ಇಬ್ಬರು `ನಾನು ನಿನ್ನ ಕೊಲೆ ಮಾಡುವೆ. ನಾನು ನಿನ್ನ ಕೊಲೆ ಮಾಡುವೆ’ ಎಂದು ಪರಸ್ಪರ ಜೀವ ಬೆದರಿಕೆ ಒಡ್ಡಿಕೊಂಡರು. ಈ ವಿಷಯವಾಗಿ ಇಬ್ಬರು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿದರು.




