ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಉಳವಿ ಚೆನ್ನಬಸವೇಶ್ವರ ಮಹಾರಥೋತ್ಸವ ಗುರುವಾರ ನಡೆದಿದ್ದು, ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಎಲ್ಲಡೆ `ಹರ ಹರ ಮಹಾದೇವ’ ಎಂಬ ಕೂಗು ಕೇಳಿ ಬಂದಿತು.
ಕೊಪ್ಪಳ, ಗದಗ, ಕಲಬುರ್ಗಿ, ವಿಜಯಪುರ, ಬೆಳಗಾವಿ, ಧಾರವಾಡ, ಬಾಗಲಕೋಟ, ಹಾವೇರಿ, ಬೈಲಹೊಂಗಲ, ಹುಬ್ಬಳ್ಳಿ, ಉತ್ತರಕರ್ನಾಟಕದ ಬಹುತೇಕ ಜಿಲ್ಲೆಯ ಭಕ್ತರು ಜಾತ್ರೆಗೆ ಆಗಮಿಸಿದ್ದಾರೆ. ನೆರೆ ರಾಜ್ಯದಿಂದಲೂ ಸಾಕಷ್ಟು ಜನ ಬಂದಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಭಕ್ತರು ಹಲವು ದಿನಗಳ ಮೊದಲೇ ಭಕ್ತರು ಚಕ್ಕಡಿ ಗಾಡಿಗಳ ಮೂಲಕ ಜಾತ್ರೆಗೆ ಬಂದಿದ್ದರು. ಕೆಲವು ಭಕ್ತರು ಮೊದಲೇ ಶ್ರೀ ದೇವರ ದರ್ಶನ ಪಡೆದು ತೆರಳಿದರು.
ಅನೇಕರು ಎತ್ತುಗಳನ್ನು ಸಿಂಗರಿಸಿ ದೇವರ ಮುಂದೆ ತಂದು ಪೂಜಿಸಿದರು. ಹರಕೆ ಪೂರೈಸಲು ಉರುಳುಗಾಯಿ ಬಿಟ್ಟರು. ಜೊತೆಗೆ ಧೀಡ ನಮಸ್ಕಾರ ಹಾಕಿದರು. ದಾಸೋಹವನ್ನು ನಡೆಸಿದರು. ವಿವಿಧ ಮಿಠಾಯಿ, ಅಲಂಕಾರಿಕ ವಸ್ತುಗಳು, ಆಟಿಕೆ ಸಾಮಾನುಗಳು, ಕೃಷಿಕರ ಸಾಮಗ್ರಿಗಳ ಮಳಿಗೆಗಲ್ಲಿ ಭಕ್ತರು ವ್ಯಾಪಾರ ನಡೆಸಿದರು.




