ಶಿರಸಿ ಹುಬ್ಬಳ್ಳಿ ರಸ್ತೆಯ ಇಳಸೂರಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಮಲ್ಲೇಶ ಹಂಚಿನಮನೆ ಚಿಕಿತ್ಸೆಗೆ ಸ್ಪಂದಿಸದೇ ಸಾವನಪ್ಪಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್’ನ ಮಲ್ಲೇಶ ಹಂಚಿನಮನೆ (37) ಫೆ 20ರಂದು ಶಿರಸಿ ಹುಬ್ಬಳ್ಳಿ ರಸ್ತೆಯಲ್ಲಿ ಬೈಕ್ ಓಡಿಸುತ್ತಿದ್ದರು. ಕೂಲಿ ಕೆಲಸಕ್ಕಾಗಿ ಬಂದಿದ್ದ ಅವರು ಶಿರಸಿಯಿಂದ ಬಿಸಿಲಕೊಪ್ಪದ ಕಡೆ ಹೋಗುವಾಗ ಇಳಸೂರಿನಲ್ಲಿ ಒಮ್ಮೆಗೆ ಕಚ್ಚಾ ರಸ್ತೆಗೆ ಬೈಕ್ ಹಾರಿಸಿದ್ದರು. ಅದಾದ ನಂತರ ಮತ್ತೆ ಡಾಂಬರು ರಸ್ತೆಗೆ ಬಂದಿದ್ದರು.
ಇದೇ ರೀತಿ ಅಡ್ಡಾದಿಡ್ಡಿ ಬೈಕ್ ಓಡಿಸಿದ ಪರಿಣಾಮ ಇಳಸೂರಿನ ಪೆಟ್ರೋಲ್ ಬಂಕ್ ಬಳಿ ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದರು. ಕಿವಿಯಿಂದ ಭಾರೀ ಪ್ರಮಾಣದಲ್ಲಿ ರಕ್ತ ಬರುವುದನ್ನು ನೋಡಿದ ಚಿಪಗಿಯ ಅಬ್ದುಲ್ ಖಾಜಿ ಅವರ ನೆರವಿಗೆ ಬಂದಿದ್ದರು. ಗಾಯಾಳುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಆರೈಕೆ ಮಾಡಲಾಗುತ್ತಿತ್ತು.
ಆದರೆ, ಫೆ 23ರ ಮಧ್ಯಾಹ್ನ ಕಿಮ್ಸ್ ಆಸ್ಪತ್ರೆಯಲ್ಲಿಯೇ ಮಲ್ಲೇಶ ಹಂಚಿನಮನೆ ಸಾವನಪ್ಪಿದರು. ಈ ಬಗ್ಗೆ ಆಸ್ಪತ್ರೆಯವರು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ಇಮೇಲ್ ಮಾಡಿದ್ದು, ಮಲ್ಲೇಶ ಹಂಚಿನಮನೆ ಅವರ ಪುತ್ರ ಪ್ರಜ್ವಲ ಹಂಚಿನಮನೆ ಸಹ ಸಾವನ್ನು ಖಚಿತಪಡಿಸಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸದ್ಯ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.





