ದೇವರ ದರ್ಶನಕ್ಕೆ ಬಂದಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಭದ್ರತೆಗೆ ನಿಂತಿದ್ದ ಪೊಲೀಸ್ ಸಿಬ್ಬಂದಿ ನಡುವೆ ಬುಧವಾರ ಗೋಕರ್ಣದಲ್ಲಿ ಗಲಾಟೆ ನಡೆದಿದೆ. ಮೊದಲು ಮಾತಿನಲ್ಲಿ ಶುರುವಾದ ಜಗಳ ಕೊನೆಗೆ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರಿಂದ ನೆರೆದಿದ್ದ ಇನ್ನಿತರ ಭಕ್ತರು ಆತಂಕಕ್ಕೆ ಒಳಗಾದರು.
ಶಿವರಾತ್ರಿ ಹಿನ್ನಲೆ ಬುಧವಾರ ಗೋಕರ್ಣಕ್ಕೆ ಲಕ್ಷಾಂತರ ಭಕ್ತರು ಬಂದಿದ್ದಾರೆ. ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಸದ್ಯ ಭಟ್ಕಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊಸ್ಕಟ್ಟಾ ಮೂಲದ ಪೊಲೀಸ್ ಸಿಬ್ಬಂದಿಯೊಬ್ಬರು ಕುಟುಂಬದ ಜೊತೆ ದೇವರ ದರ್ಶನಕ್ಕೆ ಬಂದಿದ್ದರು. ಅವರು ಅಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಬಳಿ `ತಮ್ಮ ಕುಟುಂಬಕ್ಕೆ ಮೊದಲು ದರ್ಶನಕ್ಕೆ ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು. ಏಕವಚನದಲ್ಲಿ ಮಾತನಾಡಿದ ಕಾರಣ ಆ ಮಹಿಳಾ ಸಿಬ್ಬಂದಿ ಗರಂ ಆದರು. ಪಿಎಸ್ಐ ಅವರನ್ನು ಸ್ಥಳಕ್ಕೆ ಕರೆಯಿಸಿದರು. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಅದು ಹೊಡೆದಾಟದ ಸ್ವರೂಪ ಪಡೆಯಿತು.
ಈ ವೇಳೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿ ಭಕ್ತನಾಗಿ ಬಂದಿದ್ದ ಪೊಲೀಸ್ ಸಿಬ್ಬಂದಿ ಕೆನ್ನೆಗೆ ಬಾರಿಸಿದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇದೇ ವಿಷಯವಾಗಿ ದೊಡ್ಡ ಗಲಾಟೆ ನಡೆದಿದ್ದು, ಸಾರ್ವಜನಿಕರು ಇದರಿಂದ ಗೊಂದಲಕ್ಕೆ ಒಳಗಾದರು. `ತಾನು ಹೆಡ್ ಕಾನ್ಸಟೇಬಲ್ ಆಗಿದ್ದರಿಂದ ಏಕವಚನದಲ್ಲಿ ಮಾತನಾಡಿದ್ದೇನೆ. ಯಾವುದೇ ಅಸಭ್ಯ ಪದ ಬಳಸಿಲ್ಲ’ ಎಂದು ಕುಟುಂಬಸಹಿತವಾಗಿ ದೇವರ ದರ್ಶನಕ್ಕೆ ಬಂದಿದ್ದ ಪೊಲೀಸ್ ಸಿಬ್ಬಂದಿ ಸಮರ್ಥಿಸಿಕೊಂಡರು.
ಇನ್ನೂ ಇದೇ ದಿನ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ಸಹ ಗೋಕರ್ಣಕ್ಕೆ ತೆರಳಿ ದೇವರ ದರ್ಶನ ಪಡೆದರು. ಸದ್ಯ ಈ ವಿಷಯದ ಬಗ್ಗೆ ಎರಡು ಕಡೆಯವರು ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತರುವ ಬಗ್ಗೆ ಮಾತನಾಡಿಕೊಂಡಿದ್ದಾರೆ. ದೇವರ ದರ್ಶನಕ್ಕೆ ಬಂದಿದ್ದ ಭಕ್ತ ಹಾಗೂ ಭದ್ರತೆಯಲ್ಲಿದ್ದ ಅಧಿಕಾರಿ-ಸಿಬ್ಬಂದಿ ಒಂದೇ ಇಲಾಖೆಯವರಾದ ಕಾರಣ ಪ್ರಕರಣ ರಾಜಿಯಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚಿದೆ. ಆದರೆ, ಸಾರ್ವಜನಿಕರ ಎದುರು ಪರಸ್ಪರ ಕಚ್ಚಾಟ ನಡೆಸಿದನ್ನು ಅನೇಕರು ವಿಡಿಯೋ ಸಹ ಮಾಡಿಕೊಂಡಿದ್ದು, ಪೊಲೀಸ್ ಇಲಾಖೆ ಮಾನ ಹರಾಜಾಗಿದೆ.




