ಜೊಯಿಡಾದ ರಾಮನಗರದ ಬಳಿಯ ಗವೇಗಾಳಿಯಲ್ಲಿ ಅಪರಿಚಿತ ವಾಹನ ಬಡಿದ ಪರಿಣಾಮ ಗೋಪಿಕಾ ಗಾವಡೆ ಎಂಬಾತರು ಸಾವನಪ್ಪಿದ್ದಾರೆ. ಈ ಅಪಘಾತದ ಬಗ್ಗೆ ವಾಹನ ಚಾಲಕ ಪೊಲೀಸ್ ಠಾಣೆಗೂ ಮಾಹಿತಿ ನೀಡದೇ ಪರಾರಿಯಾಗಿದ್ದು, ಆತನ ಹುಡುಕಾಟ ನಡೆದಿದೆ.
ಜೊಯಿಡಾದ ಅಖೇತಿಯವರಾಗಿದ್ದ ಗೋಪಿಕಾ ಗಾವಡೆ (45) ಅವರು ಮಾನಸಿಕ ಅಸ್ವಸ್ಥರಾಗಿದ್ದರು. ಮನೆ ಬಿಟ್ಟು ಅವರು ಊರೂರು ಸುತ್ತುತ್ತಿದ್ದರು. ಫೆ 25ರಂದು ಅವರು ಗವೇಗಾಳಿಗೆ ತೆರಳಿದ್ದರು. ಬೆಳಗಾವಿ ಪಣಜಿ ಹೆದ್ದಾರಿಯಲ್ಲಿ ನಡೆದು ಹೋಗುತ್ತಿದ್ದರು. ಆಗ, ಅಪರಿಚಿತ ವಾಹನವೊಂದು ಅವರಿಗೆ ಡಿಕ್ಕಿಯಾಗಿದೆ.
ವಾಹನ ಡಿಕ್ಕಿಯಾದ ಬಗ್ಗೆ ಚಾಲಕ ಎಲ್ಲಿಯೂ ಹೇಳಿಲ್ಲ. ಗಾಯಾಳು ರಸ್ತೆ ಅಂಚಿನಲ್ಲಿ ಬಿದ್ದು ಒದ್ದಾಟ ನಡೆಸಿದರೂ ನೆರವು ನೀಡಿಲ್ಲ. ಅವರನ್ನು ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಮಾಡಿಲ್ಲ. ಅಪಘಾತ ನಡೆದ ನಂತರ ವಾಹನಸಹಿತ ಆತ ಪರಾರಿಯಾಗಿದ್ದರಿಂದ ಗೋಪಿಕಾ ಗಾವಡೆ ಸಾವನಪ್ಪಿದ್ದಾರೆ.
ಈ ವಿಷಯ ಅರಿತ ಗೋಪಿಕಾ ಅವರ ಪತಿ ಗೋಪಾಳ ಗಾವಡೆ ರಾಮನಗರ ಪೊಲೀಸ್ ಠಾಣೆಗೆ ಆಗಮಿಸಿ ಅಳಲು ತೋಡಿಕೊಂಡರು. ಅಪರಿಚಿತ ವಾಹನ ಚಾಲಕನ ವಿರುದ್ಧ ಅವರು ಪ್ರಕರಣ ದಾಖಲಿಸಿದರು.




