ಯಲ್ಲಾಪುರದ ಮಮತಾ ಮೊಗೇರ್ ಅವರು ಶಿರಸಿಗೆ ಹೋಗಿ ತಮ್ಮ ಬಳಿಯಿದ್ದ ಹಣ ಹಾಗೂ ಒಡವೆ ಕಳೆದುಕೊಂಡಿದ್ದಾರೆ. ಅವರ ಬ್ಯಾಗಿನಲ್ಲಿದ್ದ ಹಣ ಹಾಗೂ ಒಡವೆ ಕಳ್ಳರ ಪಾಲಾಗಿದೆ.
ಯಲ್ಲಾಪುರದ ಮಂಚಿಕೇರಿ-ಹಾಸಣಗಿ ಬಳಿಯ ಒಳ್ಳೆಸರದಲ್ಲಿ ಮಮತಾ ಮೊಗೇರ್ ಅವರು ವಾಸವಾಗಿದ್ದಾರೆ. ಮೇ 19ರಂದು ಅವರು ತಮ್ಮ ಮಗನ ಜೊತೆ ಶಿರಸಿಗೆ ಹೋಗಿದ್ದರು. ಸಂಜೆ ಅಲ್ಲಿಂದ ಮರಳುವಾಗ ಬಸ್ಸಿನೊಳಗೆ ಅವರ ಹಣ ಹಾಗೂ ಒಡವೆ ನಾಪತ್ತೆಯಾಗಿದೆ.
ಮಮತಾ ಅವರು ತಮ್ಮ ಮಗ ಪ್ರೀತಮ್ ಜೊತೆ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಮಂಚಿಕೇರಿ ಬಸ್ಸು ಬಂದ ತಕ್ಷಣ ಅವರು ಆ ಬಸ್ಸು ಏರಿದ್ದರು. ಈ ವೇಳೆ ಹೆಗಲಿಗೆ ಹಾಕಿಕೊಂಡಿದ್ದ ವೆನಿಟಿ ಬ್ಯಾಗಿನಲ್ಲಿದ್ದ 1.5 ಲಕ್ಷ ರೂ ಮೌಲ್ಯದ ಬಂಗಾರ ಹವಳದ ಸರ, 75 ಸಾವಿರ ರೂ ಮೌಲ್ಯದ ಚಿನ್ನದ ನೆಕ್ಲೇಸನ್ನು ಕಳ್ಳರು ಅಪಹರಿಸಿದರು. ಜೊತೆಗೆ ಪರ್ಸಿನಲ್ಲಿದ್ದ 17500ರೂ ಹಣವನ್ನು ಎಗರಿಸಿದರು.
ಹಣ ಕಾಣೆಯಾದ ಬಗ್ಗೆ ಅರಿತ ಮಮತಾ ಮೊಗೇರ್ ಅವರು ಶಿರಸಿಗೆ ತೆರಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಕಳ್ಳರನ್ನು ಹುಡುಕಿ ತಮ್ಮ ಹಣ-ಒಡವೆ ಮರಳಿಸಿ ಎಂದವರು ಮನವಿ ಮಾಡಿಕೊಂಡರು. ಎಎಸ್ಐ ಹೊನ್ನಪ್ಪ ಆಗೇರ್ ಅವರು ಮಮತಾ ಅವರಿಗೆ ಸಮಾಧಾನ ಮಾಡಿ ಕಳುಹಿಸಿದ್ದು, ಕಳ್ಳರ ಹುಡುಕಾಟ ನಡೆಸಿದ್ದಾರೆ.







