ಕಾರವಾರ: ಮೈಸೂರಿನ ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್’ನ 21 ಹುದ್ದೆಗಳ ನೇಮಕಾತಿ ಅಕ್ರಮಕ್ಕೆ ಸಂಬoಧಿಸಿ ಕರ್ನಾಟಕ ವಿಶ್ವವಿದ್ಯಾಲಯ ಅಧೀನದ ಕಾರವಾರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಡಳಿತಾಧಿಕಾರಿ ಡಾ ಜೆ ಎಲ್ ರಾಠೋಡ ಅವರನ್ನು ವಿಶ್ವ ವಿದ್ಯಾಲಯ ಅಮಾನತು ಮಾಡಿದೆ.
1920ರಲ್ಲಿ ಸ್ಥಾಪಿತ ಮೈಸೂರಿನ ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ನ ವಿವಿಧ ಹುದ್ದೆಗಳ ನೇಮಕಾತಿಗೆ 2024ರ ಮಾ 10ರಂದು ಲಿಖಿತ ಪರೀಕ್ಷೆ ನಡೆದಿತ್ತು. ವಿಶ್ವವಿದ್ಯಾಲಯ ಅನುಮತಿ ಪಡೆಯದೇ ಕಾರವಾರ ಸ್ನಾತಕೋತ್ತರ ಅಧ್ಯಯನ ಕೇಂದ್ರವು ಪರೀಕ್ಷಾ ಪ್ರಾಧಿಕಾರವಾಗಿ ನೇಮಕಾತಿ ಪರೀಕ್ಷೆ ನಡೆಸಿದ ಆರೋಪ ವ್ಯಕ್ತವಾಗಿತ್ತು.
ಕೆಲ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಯಲ್ಲಿನ 50 ಪ್ರಶ್ನೆಗಳ ಬಹು ಆಯ್ಕೆಗಳಲ್ಲಿ ಸರಿಯಾದ ಆಯ್ಕೆಯನ್ನು ಸಣ್ಣದಾಗಿ ಮುದ್ರಿಸಿ ಅಕ್ರಮ ಎಸೆಗಿದ ಆರೋಪ ವ್ಯಕ್ತವಾಗಿದ್ದು, ಉದ್ದೇಶಪೂರ್ವಕವಾಗಿ ಕೆಲ ಅಭ್ಯರ್ಥಿಗಳಿಗೆ ಒಎಂಆರ್ ಪ್ರತಿ ನೀಡಿರಲಿಲ್ಲ ಎಂಬ ದೂರಿತ್ತು. ಈ ಕುರಿತು ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿ ಜಿನ್ನಾಂಬೆ ಎಂಬುವರು ಮೈಸೂರಿನ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಕವಿವಿಯ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ವಿಭಾಗವು ಆ 19ರಂದು ಸತ್ಯಶೋಧನಾ ಸಮಿತಿ ರಚಿಸಿ ತನಿಖೆಗೆ ಸೂಚಿಸಿತ್ತು. ಸಮಿತಿಯವರು 23ರಂದು ಕಾರವಾರ ಸ್ನಾತಕೋತ್ತರ ಕೇಂದ್ರಕ್ಕೆ ಭೇಟಿ ನೀಡಿದಾಗ ಡಾ ಜಿ ಎಲ್ ರಾಠೋಡ ಸಮರ್ಪಕ ದಾಖಲಾತಿಗಳನ್ನು ಸಲ್ಲಿಸಿರಲಿಲ್ಲ. ಅಲ್ಲದೆ, 15 ದಿನಗಳ ಕಾಲಾವಕಾಶ ಕೇಳಿದ್ದರು.
ನೇಮಕಾತಿ ಪರೀಕ್ಷಾ ಅಕ್ರಮ ವಿಷಯ ಆ 27ರಂದು ಸಿಂಡಿಕೇಟ್ ಸಭೆಯಲ್ಲಿ ಚರ್ಚೆಗೆ ಬಂದಿದ್ದು, ಸಿಂಡಿಕೇಟ್ ಸಭೆ ತೀರ್ಮಾನದಂತೆ ಡಾ ರಾಠೋಡ್ ಅವರನ್ನು ಅಮಾನತು ಮಾಡಲಾಗಿದೆ. `ಅನ್ಯಾಯವಾಗಿ ತನ್ನನ್ನು ಅಮಾನತು ಮಾಡಲಾಗಿದ್ದು, ಈ ಬಗ್ಗೆ ಕಾನೂನು ಹೋರಾಟ ನಡೆಸುವೆ’ ಎಂದು ಜಿ ಎಲ್ ರಾಠೋಡ್ ಹೇಳಿದ್ದಾರೆ.




