ಯಲ್ಲಾಪುರದಿಂದ ಮುಂಡಗೋಡಿಗೆ ತೆರಳುವ ರಸ್ತೆ ಹೊಂಡಗಳಿoದ ಕೂಡಿದ್ದು, ಹುಲಿಮನೆಯ ಬಳಿ ನಿತ್ಯ ವಾಹನಗಳು ಸಿಕ್ಕಿಕೊಳ್ಳುತ್ತಿವೆ. ಮಳೆಗಾಲದ ಅವಧಿಯಲ್ಲಿ ವಾಹನ ಚಾಲಕರಿಗೆ ಹೊಂಡದ ಆಳ-ಅಗಲ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ!
ಸೋಮವಾರ ಸಂಜೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನವೊಂದು ಹೊಂಡದಲ್ಲಿ ಸಿಕ್ಕಿಬಿದ್ದಿದ್ದು, ಅದನ್ನು ಹೊರತೆಗೆಯಲು ಹರಸಾಹಸವೇ ನಡೆಯಿತು. ಹಿಂದೆ ಬರುತ್ತಿದ್ದ ಸರ್ಕಾರಿ ಬಸ್ಸಿನಲ್ಲಿದ್ದವರು ಇಳಿದು ಆ ವಾಹನ ಹೊರ ತೆಗೆಯುವ ಪ್ರಯತ್ನ ನಡೆಸಿದರು. ಕಳೆದ ನಾಲ್ಕು ದಿನದ ಅವಧಿಯಲ್ಲಿ ಐದು ವಾಹನಗಳು ಇಲ್ಲಿ ಸಿಕ್ಕಿಕೊಂಡಿದೆ. ಈ ಪೈಕಿ ಮೂರು ಬುಲೆರೋ ವಾಹನಗಳನ್ನು ಸ್ಥಳೀಯರೊಬ್ಬರ ಟಾಕ್ಟರ್ ಬಳಸಿ ಹೊರ ಜಗ್ಗಲಾಯಿತು.
ಸೋಮವಾರ ಸಂಜೆ 407 ವಾಹನ ಸಿಲುಕಿದ್ದು ತಾಸು ಕಳೆದರೂ ಹೊಂಡದಿoದ ಮೇಲೆ ತರಲು ಸಾಧ್ಯವಾಗಲಿಲ್ಲ. ಟಾಕ್ಟರಿನಿಂದಲೂ ಆ ಲಾರಿ ಮೇಲೆತ್ತುವ ಹಾಗಿರಲಿಲ್ಲ. ಹೊಂಡ ಹಾರಿದ ಲಾರಿ ಹಿಂದೆ ಸರ್ಕಾರಿ ಬಸ್ಸು ಬರುತ್ತಿದ್ದು, ಬಸ್ಸಿನ ಚಾಲಕ-ನಿರ್ವಾಹಕರ ಜೊತೆ ಕೆಲ ಪ್ರಯಾಣಿಕರು ಆಗಮಿಸಿ ಲಾರಿ ಮೇಲೆತ್ತುವ ಪ್ರಯತ್ನ ನಡೆಸಿದರು. ಆದರೆ, ಅದೂ ಪ್ರಯೋಜನಕ್ಕೆ ಬರಲಿಲ್ಲ. ಲಾರಿಯ ಒಂದು ಬದಿಗೆ ಮರದ ಕೋಲುಗಳನ್ನು ಅಳವಡಿಸಿ ಮೇಲೆತ್ತುವ ಕೆಲಸವೂ ಉಪಯೋಗವಾಗಲಿಲ್ಲ. ಕೊನೆಗೆ ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರು ಕೂಲಿ ಕೆಲಸ ಮಾಡಿ, ಆ ಲಾರಿಯಲ್ಲಿದ್ದ ಅಕ್ಕಿ ಮೂಟೆಗಳನ್ನು ಬೇರೆ ವಾಹನಕ್ಕೆ ತುಂಬಿದರು. ಅದಾದ ನಂತರ ಆ ಲಾರಿ ಮೇಲೆ ಬಂದು ಸಂಚಾರ ಮುಂದುವರೆಸಿತು.
ಹುಲಿಮನೆ ತಿರುವಿನಿಂದ 100 ಮೀ ಮುಂದೆ ಒಂದೇ ಕಡೆ ನಾಲ್ಕೆöÊದು ಹೊಂಡಗಳಾಗಿವೆ. ಪ್ರತಿ ಹೊಂಡವೂ 2 ಅಡಿಗಿಂತಲೂ ಆಳವಾಗಿದೆ. ಅಲ್ಲಿಂದ 100-200 ಮೀ ಅಂತರದಲ್ಲಿ ಇನ್ನಷ್ಟು ಹೊಂಡಗಳಿದ್ದು, ಯಾವುದೇ ವಾಹನವಿದ್ದರೂ ಒಂದಾದರೂ ಹೊಂಡದಲ್ಲಿ ಬೀಳುವುದು ನಿಶ್ಚಿತ. ಇಲ್ಲಿ ಸಿಕ್ಕಿಬಿದ್ದ ವಾಹನಗಳೆಲ್ಲವೂ ಅಕ್ಕಿ ಸಾಗಾಟದ ವಾಹನಗಳೇ ಆಗಿದ್ದವು. ಹಾವೇರಿಯಿಂದ ಮುಂಡಗೋಡು ಮಾರ್ಗವಾಗಿ ಅಂಕೋಲಾ ಕಡೆ ಅಕ್ಕಿ ಸಾಗಿಸುತ್ತಿದ್ದ ಬುಲೆರೋ ವಾಹನದವರು ಇಲ್ಲಿ ಪದೇ ಪದೇ ಸಿಕ್ಕಿ ಬೀಳುತ್ತಿದ್ದಾರೆ. ಜೊತೆಗೆ ಇತರೆ ವಾಹನ ಸವಾರರು ಸಹ ಹೊಂಡಕ್ಕೆ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ.




