ಶಿರಸಿ ದೇವಿಕೆರೆಯ ಪಕ್ಕದಲ್ಲಿರುವಂತಹ ಭೂತಪ್ಪನ ಕಟ್ಟೆ ಹಲವು ಆಸಕ್ತರಿಗೆ ಶೃದ್ಧೆ ಹಾಗೂ ಭಕ್ತಿಯ ಕೇಂದ್ರ. ಇಲ್ಲಿರುವ ಭೂತೇಶ್ವರ ದೇವಸ್ಥಾನಕ್ಕೆ ನಡೆದುಕೊಂಡರೆ ಎಲ್ಲಾ ಬಗೆಯ ತಾಪತ್ರೆಯ ಹಾಗೂ ಅನಾರೋಗ್ಯ ದೂರವಾಗುತ್ತದೆ ಎಂಬುದು ಭಕ್ತರ ನಂಬಿಕೆ.
ಶಿರಸಿ, ಸಿದ್ದಾಪುರ, ಯಲ್ಲಾಪುರ, ಹಾನಗಲ್, ಅಕ್ಕಿ ಆಲೂರು ಸೇರಿ ವಿವಿಧ ಭಾಗದ ಭಕ್ತರು ಇಲ್ಲಿ ನಡೆದುಕೊಳ್ಳುತ್ತಾರೆ. ಹರಕೆ ಹೊತ್ತು ಅದರ ಪ್ರಕಾರ ನಡೆದುಕೊಳ್ಳುತ್ತಾರೆ. ಇಲ್ಲಿ ಹರಕೆ ಹೇಳಿಕೊಂಡ ನಂತರ ಸಮಸ್ಯೆ ಬಗೆಹರಿದ ಬಗ್ಗೆ ಹೇಳಿಕೊಳ್ಳುವವರು ಸಹ ಸಾವಿರ ಸಂಖ್ಯೆಯಲ್ಲಿದ್ದಾರೆ. ಶ್ರೀಧರ ಸ್ವಾಮಿಗಳು ಸಹ ಶಿರಸಿಗೆ ಭೇಟಿ ನೀಡಿದಾಗ ಭೂತೇಶ್ವರ ಪ್ರಭಾವದ ಬಗ್ಗೆ ಹೇಳಿದ್ದರು ಎಂದು ಇಲ್ಲಿನ ಹಿರಿಯ ನಾಗರಿಕರು ಈಗಲೂ ನೆನೆಪಿಸುತ್ತಾರೆ.
ಪ್ರಸ್ತುತ ಗಣೇಶ ಹಬ್ಬದ ಅವಧಿಯಲ್ಲಿ ದೇವಿಕೆರೆಯ ಭೂತೇಶ್ವರ ಸನ್ನಿಧಾನಕ್ಕೆ ಬಂಗಾರದ ಕವಚ ಸಮರ್ಪಣೆ ಆಗುತ್ತಿದೆ. 15 ಲಕ್ಷ ರೂ ವೆಚ್ಚದಲ್ಲಿ ಭಕ್ತರು ಕವಚ ಮಾಡಿಸಿದ್ದಾರೆ. 143 ಗ್ರಾಂ ಬಂಗಾರ ಹಾಗೂ 509 ಗ್ರಾಂ ಬೆಳ್ಳಿಯಿಂದ ಕೂಡಿದ ಕವಚ ಇದಾಗಿದ್ದು, ಸ್ವರ್ಣ ಜುವೆಲರ್ಸ’ನವರು ಇದನ್ನು ತಯಾರಿಸಿದ್ದಾರೆ. ಗೋಪಾಲಕೃಷ್ಣ ನಾಯಕ ವಿಶೇಷ ಮುತುವರ್ಜಿಯಿಂದ ಕವಚ ಸಿದ್ಧಪಡಿಸಿಕೊಟ್ಟಿದ್ದಾರೆ. ಭೂತೇಶ್ವರ ಕಟ್ಟೆ ಅಭಿವೃದ್ಧಿ ಸಮಿತಿ, ಭೂತೇಶ್ವರ ಗಜಾನನೋತ್ಸವ ಸಮಿತಿಯ ಜೊತೆ ದೇವಿಕೆರೆ ಭಕ್ತರ ಪ್ರಯತ್ನದಿಂದ ಈ ಕವಚ ಸಿದ್ಧವಾಗಿದೆ.




