ಭಟ್ಕಳ: ಗಣೇಶನ ಮೂರ್ತಿ ವಿಸರ್ಜಿಸಲು ಅರಬ್ಬಿ ಸಮುದ್ರಕ್ಕೆ ಹೋಗಿ ಅಲೆಗಳ ಅಬ್ಬರಕ್ಕೆ ಸಿಲುಕಿದ ಲ್ಲಿ ಸಮರ್ಥ ಶ್ರೀಧರ ಖಾರ್ವಿ (14) ಎಂಬಾತನನ್ನು ಕರಾವಳಿ ಕಾವಲು ಪಡೆಯವರು ರಕ್ಷಿಸಿದ್ದಾರೆ.
ತಲಗೋಡಿನಲ್ಲಿ ಸ್ಥಾಪಿಸಲಾದ ಗಣಪನ ವಿಗ್ರಹ ವಿಸರ್ಜನೆಗೆ ಊರಿನವರು ಭಾನುವಾರ ಸಮುದ್ರಕ್ಕೆ ಬಂದಿದ್ದರು. ಆಗ ಗಣೇಶನ ವಿಗ್ರಹ ಜೊತೆ ಇದ್ದ ಸಮರ್ಥ ಖಾರ್ವಿ ಸಮುದ್ರಕ್ಕೆ ಇಳಿದಿದ್ದ. ವಿಗ್ರಹದ ಜೊತೆ ನೀರಿನಲ್ಲಿ ಮುಂದೆ ಹೋಗಿದ್ದು ಗಣಪನನ್ನು ಮುಳುಗಿಸಿದ ನಂತರವೂ ಅಲ್ಲಿಯೇ ಇದ್ದ. ಆಗ ಏಕಾಏಕಿ ಬಂದ ಅಬ್ಬರದ ಅಲೆಯಲ್ಲಿ ಸಮರ್ಥ ಖಾರ್ವಿ ಕೊಚ್ಚಿ ಹೋಗಿದ್ದ.
ತಕ್ಷಣ ಇದನ್ನು ನೋಡಿದ ಕರಾವಳಿ ಕಾವಲು ಪಡೆಯ ಸಿಬ್ಬಂದಿ ರಾಘವೇಂದ್ರ ನಾಯ್ಕ, ಸಚಿನ್ ಖಾರ್ವಿ ಸಮುದ್ರಕ್ಕೆ ಜಿಗಿದು ಬಾಲಕ ಜುಟ್ಟು ಹಿಡಿದು ದಡಕ್ಕೆ ಎಳೆದು ತಂದರು. ಅಸ್ವಸ್ಥಗೊoಡ ಆತನನ್ನು ಇದೀಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರಾವಳಿ ಕಾವಲು ಪಡೆಯ ಸಿಪಿಐ ಕುಸುಮಾಧರ ಕೆ ಆತನ ಆರೋಗ್ಯ ವಿಚಾರಿಸಿದರು.





