ಹಳಿಯಾಳ: ಕಾನ್ವೆಂಟ್ ರೋಡಿನ ರಾಹುಲ್ ಹಯವಂತ ವಾಣಿ ಎಂಬಾತರನ್ನು ಭೇಟಿ ಮಾಡಿದ ಚಹ್ವಾಣ ಪ್ಲಾಟಿನ ರಾಕೇಶ್ ದಿನಕರ ವಾಲೇಕರ್ ಎಂಬಾತ `1 ಲಕ್ಷ ರೂ ಕೊಟ್ಟರೆ ಆ ಹಣ ಡಬಲ್ ಮಾಡಿಕೊಡುವೆ’ ಎಂದು ತಿಳಿಸಿದ್ದು, `ಹಣ ಇಲ್ಲ’ ಎಂದ ಕಾರಣ 1.50 ಲಕ್ಷ ರೂ ಮೌಲ್ಯದ ಬೈಕ್ ಎತ್ತಿಕೊಂಡು ಹೋಗಿದ್ದಾನೆ!
ಸೆ 7ರಂದು ರಾಹುಲ್ ತನ್ನ ರಾಯಲ್ ಎನ್ಫೀಲ್ಡ್ ಬೈಕ್ ಕಳೆದುಕೊಂಡಿದ್ದಾರೆ. `ಬೈಕ್ ಎತ್ತಿಕೊಂಡು ಹೋದವ ಹುಂಬ ಸ್ವಭಾವದವನಾಗಿದ್ದು, ಆತನ ವಿರುದ್ಧ ದೂರು ನೀಡಲು ಭಯವಾಗುತ್ತದೆ’ ಎಂದವರು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಕೊನೆಗೂ ಧೈರ್ಯ ಮಾಡಿ ಪೊಲೀಸ್ ದೂರು ನೀಡಿದ್ದು, `ತನ್ನ ಬೈಕ್ ಮರಳಿಸಿ’ ಎಂದು ಮನವಿ ಮಾಡಿದ್ದಾರೆ.
ರಾಹುಲ್’ರನ್ನು ಭೇಟಿಯಾದ ರಾಕೇಶ `ಅರ್ಜಂಟಾಗಿ 1 ಲಕ್ಷ ರೂ ಹಣ ಕೊಡು. ಅದನ್ನು ಡಬಲ್ ಮಾಡಿ ಕೊಡುವೆ’ ಎಂದು ಹೇಳಿದ್ದಾನೆ. ಆಗ ರಾಹುಲ್ `ತನ್ನ ಬಳಿ ಅಷ್ಟು ಹಣ ಇಲ್ಲ’ ಎಂದು ತಿಳಿಸಿದ್ದು, `ಹಣ ಇಲ್ಲ ಎಂದಾದರೆ ಬೈಕ್ ಕೊಡು’ ಎಂದು ರಾಕೇಶ ಕೇಳಿದ್ದಾನೆ. ರಾಹುಲ್ ಆಗ ಅನುಮಾನಿಸಿದಾಗ `ಬೈಕ್ ಕೊಡಲಿಲ್ಲ ಎಂದರೆ ಸಾಯಿಸಿಬಿಡುವೆ’ ಎಂದು ಬೆದರಿಸಿದ್ದಾನೆ. ಇದರಿಂದ ಹೆದರಿದ ರಾಹುಲ್ ತಕ್ಷಣ ಬೈಕ್ ಚಾವಿಯನ್ನು ಆತನಿಗೆ ನೀಡಿದ್ದು, ಬೈಕ್ ತೆಗೆದುಕೊಂಡು ಹೋದವ ಮತ್ತೆ ಸಿಕ್ಕಿಲ್ಲ.